ಆಂಧ್ರಪ್ರದೇಶ, ಡಿ 06 (DaijiworldNews/DB): ತನ್ನಿಂದ ದೂರವಾಗಿದ್ದಲ್ಲದೆ, ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ದಂತ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಗೆಳತಿಯನ್ನು ಆಕೆಯ ಎಂಜಿನಿಯರ್ ಸ್ನೇಹಿತ ಕತ್ತು ಸೀಳಿ ಕೊಲೆಗೈದ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತಕ್ಕೆಲಪಾಡುವಿನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಕೃಷ್ಣಾ ಜಿಲ್ಲೆಯ ಕೃಷ್ಣಾಪುರಂ ನಿವಾಸಿ, ವಿಜಯವಾಡದ ಸಿದ್ದಾರ್ಥಾ ಮೆಡಿಕಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಪದವಿಯ ಮೂರನೇ ವರ್ಷದ ವಿದ್ಯಾರ್ಥಿನಿ ತಪಸ್ವಿ ಗ್ಯಾನೇಶ್ವರ್ (20) ಕೊಲೆಯಾದ ಯುವತಿ. ಆಕೆಯ ಸ್ನೇಹಿತ, ವಿಜಯವಾಡದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಅಗಿದ್ದ ಗ್ಯಾನೇಶ್ವರ್ ( 26) ಬಂಧಿತ ಆರೋಪಿ. ಈತನ ವಿರುದ್ದ ಇಂಡಿಯನ್ ಪೀನಲ್ ಕೋಡ್ 302 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಪಸ್ವಿಯನ್ನು ಶಸ್ತ್ರಚಿಕಿತ್ಸೆಗಳಿಗೆ ಉಪಯೋಗಿಸುವ ಚಾಕುವಿನಿಂದ ಗಂಟಲು ಸೀಳಿ ಕೊಲೆಗೈಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಬಂಡಾರು ಸುರೇಶ್ ಬಾಬು ತಿಳಿಸಿದ್ದಾರೆ.
ತಪಸ್ವಿ ಹೆತ್ತವರು ಮುಂಬೈನಲ್ಲಿ ವಾಸವಾಗಿದ್ದು, ಶೈಕ್ಷಣಿಕ ಉದ್ದೇಶದಿಂದ ಆಕೆ ಕಾಲೇಜು ಹಾಸ್ಟೆಲ್ನಲ್ಲಿದ್ದಳು. ಇನ್ಸ್ಟಾಗ್ರಾಂ ಮೂಲಕ ಎರಡು ವರ್ಷದ ಹಿಂದೆ ಆಕೆಗೆ ಗ್ಯಾನೇಶ್ಚರ್ ಪರಿಚಯವಾಗಿದ್ದ. ಬಳಿಕ ಇದು ಪ್ರೀತಿಗೆ ತಿರುಗಿತ್ತು. ಆದರೆ ಸುಮಾರು ನಾಲ್ಕು ತಿಂಗಳ ಹಿಂದೆ ಇಬ್ಬರ ನಡುವೆ ಸಂಬಂಧ ಕಡಿದಿತ್ತು. ಆ ಬಳಿಕ ಆತ ನಿರಂತರವಾಗಿ ಮದುವೆಯಾಗುವಂತೆ ಯುವತಿಗೆ ಒತ್ತಡ ಹೇರಿದ್ದು, ಆತನ ಕಿರುಕುಳಕ್ಕೆ ಬೇಸತ್ತು ಆಕೆ ತನ್ನ ಸಹಪಾಠಿಯೊಂದಿಗೆ ಕಳೆದ ಹತ್ತು ದಿನಗಳಿಂದ ವಾಸ ಮಾಡುತ್ತಿದ್ದಳು ಎಂದು ಅವರು ವಿವರಿಸಿದ್ದಾರೆ.
ಸೋಮವಾರ ರಾತ್ರಿ ಆಕೆಯ ಸಹಪಾಠಿಯ ರೂಂಗೆ ತೆರಳಿದ ಗ್ಯಾನೇಶ್ವರ್, ಅಲ್ಲಿ ಗಲಾಟೆ ಎಬ್ಬಿಸಿದ್ದಾನೆ. ಈ ವೇಳೆ ಸಹಪಾಠಿಯು ಅವನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರೂ ಆತ ಸುಮ್ಮನಾಗಿಲ್ಲ. ಬಳಿಕ ತನ್ನ ಜೇಬಿನಲ್ಲಿದ್ದ ಶಸ್ತ್ರಚಿಕಿತ್ಸೆಗೆ ಬಳಸುವ ಚಾಕು ಹೊರತೆಗೆದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಹಪಾಠಿಯು ನೆರೆಹೊರೆಯವರನ್ನು ಕರೆಯಲು ಹೊರಗೋಡಿದ್ದಾನೆ. ಹಿಂತಿರುಗಿ ಬರುವಷ್ಟರಲ್ಲಿ ಗ್ಯಾನೇಶ್ವರ್ ಆಕೆಯ ಗಂಟಲು ಸೀಳಿ ಇನ್ನೊಂದು ರೂಂಗೆ ಎಳೆದೊಯ್ದು ಬಾಗಿಲು ಹಾಕಿದ್ದ. ನೆರೆಹೊರೆಯವರು ಆಗಮಿಸಿ ಬಾಗಿಲು ಮುರಿದು ಒಳಹೋಗುವಷ್ಟರಲ್ಲಿ ಆತ ತನ್ನ ಕೈ ಕೊಯ್ದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದ. ಕೂಡಲೇ ಆತನನ್ನು ಹಿಡಿದು ಪೊಲೀಸರನ್ನು ಕರೆಸಿ ತಪಸ್ವಿಯನ್ನು ಗುಂಟೂರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.