ನವದೆಹಲಿ, ಡಿ 06 (DaijiworldNews/DB): ಅಪ್ರಾಪ್ತ ಬಾಲಕಿಯ ಸಮ್ಮತಿಯನ್ನು ಒಪ್ಪಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯೊಬ್ಬನಿಗೆ ಜಾಮೀನು ನಿರಾಕರಿಸಿದೆ.
ಅಪ್ರಾಪ್ತ ಬಾಲಕಿಯ ಸಮ್ಮತಿ ಕಾನೂನಿನ ಕಣ್ಣಿನಲ್ಲಿ ಒಪ್ಪಿಗೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಆರೋಪಿಯು ಸಂತ್ರಸ್ತೆಯ ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾನೆ. ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದಾಗ ಆಕೆ ಅಪ್ರಾಪ್ತೆಯಾಗಿರಲಿಲ್ಲ ಎಂದು ಬಿಂಬಿಸಲು ಈ ತಿದ್ದುಪಡಿ ಮಾಡಿದಂತಿದೆ. ಇದು ಗಂಭೀರ ಅಪರಾಧವಾಗಿದೆ ಎಂದು ನ್ಯಾ. ಜಸ್ಮೀತ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
23 ವರ್ಷದ ಆರೋಪಿಯು ಈಗಾಗಲೇ ವಿವಾಹವಾಗಿದ್ದು, ಆ ಬಳಿಕ 16 ವರ್ಷದ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ. ಇದು ಆಕೆಯ ಸಮ್ಮತಿಸಹಿತವಾಗಿದ್ದರೂ, ಆಕೆ ಅಪ್ರಾಪ್ತಳಾಗಿರುವುದರಿಂದ ಸಮ್ಮತಿಯನ್ನು ಒಪ್ಪಿಗೆಯೆಂದು ಪರಿಗಣಿಸಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾ. ಜಸ್ಮೀತ್ ಸಿಂಗ್, ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದರು.
ಪುತ್ರಿಯ ನಾಪತ್ತೆ ಹಿನ್ನೆಲೆಯಲ್ಲಿ 2019ರಲ್ಲಿ ಬಾಲಕಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಆಕೆ ಪತ್ತೆಯಾಗಿದ್ದಳು. ಪತ್ತೆ ವೇಳೆ ಆಕೆ ಯುವಕನೊಂದಿಗೆ ಇರುವುದನ್ನು ಪೊಲೀಸರು ಪ್ರಶ್ನಿಸಿದಾಗ, ಆತ ತನ್ನ ಗೆಳೆಯನೆಂದೂ, ಒಂದೂವರೆ ತಿಂಗಳು ಆತನೊಂದಿಗೆ ಇದ್ದೆ ಎಂದೂ ತಿಳಿಸಿದ್ದಳು. ಅಲ್ಲದೆ ಒಪ್ಪಿಗೆಯೊಂದಿಗೆ ನನ್ನೊಂದಿಗೆ ಆತ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಮ್ಯಾಜಿಸ್ಟ್ರೇಟ್ ಎದುರು ಬಾಲಕಿ ಹೇಳಿಕೆ ನೀಡಿದ್ದಳು. ಈ ಪ್ರಕರಣದಲ್ಲಿ 2019ರಿಂದ ಬಂಧನದಲ್ಲಿರುವ ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.