ನವದೆಹಲಿ, ಡಿ 06 (DaijiworldNews/HR): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ಕಿಡ್ನಿ ಕೊಟ್ಟಿದ್ದು, ನೆಟ್ಟಿಗರು, ರಾಜಕೀಯ ನಾಯಕರು ಸೇರಿದಂತೆ ಅನೇಕರು ರೋಹಿಣಿಯನ್ನು ಶ್ಲಾಘಿಸುತ್ತಿದ್ದಾರೆ.
ತನ್ನ ತಂದೆಗೆ ಒಂದು ಕಿಡ್ನಿ ದಾನ ಮಾಡಿರುವ ರೋಹಿಣಿ ಅವರನ್ನು ಬಿಜೆಪಿ ನಾಯಕ, ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಸಚಿವ ಗಿರಿರಾಜ್ ಸಿಂಗ್ ಟ್ವೀಟ್ ಮಡಿ ಶ್ಲಾಘಿಸಿದ್ದು, ಗಿರಿರಾಜ್ ಸಿಂಗ್ ಅವರು ಲಾಲೂ ಪ್ರಸಾದ್ ಯಾದವ್ ಮತ್ತು ಇಡೀ ಆರ್ಜೆಡಿ ಪಕ್ಷದ ಅವರ ಕಟು ಟೀಕಾಕಾರಲ್ಲ ಒಬ್ಬರು ಎಂದೇ ಗುರುತಿಸಿಕೊಂಡವರು. ಅವರೀಗ ರೋಹಿಣಿಯವರನ್ನು ಹೊಗಳಿ ಟ್ವೀಟ್ ಮಾಡಿದ್ದು, ರೋಹಿಣಿ ಬೆಡ್ ಮೇಲೆ ಮಲಗಿರುವ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಇನ್ನು 'ಮಗಳು ಎಂದರೆ ನಿನ್ನಂತಿರಬೇಕು. ನಿನ್ನ ಬಗ್ಗೆ ತುಂಬ ಹೆಮ್ಮೆಯೆನಿಸುತ್ತದೆ. ಮುಂದಿನ ಪೀಳಿಗೆಯವರಿಗೆ ನೀನು ಮಾದರಿ ಎಂದು ರೋಹಿಣಿಯವರಿಗೆ ಹೇಳಿದ್ದಾರೆ.
ಸಿಂಗಾಪುರದ ಮೌಂಟ್ ಎಲಿಜಿಬೆತ್ ಆಸ್ಪತ್ರೆಯಲ್ಲಿ ಲಾಲೂಗೆ ಕಿಡ್ನಿ ಕಸಿ ಆಪರೇಶನ್ ನಡೆದ ಬೆನ್ನಲ್ಲೇ ಟ್ವೀಟ್ ಮಾಡಿದ ಅವರ ಪುತ್ರ ತೇಜಸ್ವಿ ಯಾದವ್, ಸರ್ಜರಿ ಯಶಸ್ವಿಯಾಗಿದೆ. ಅಪ್ಪ ಮತ್ತು ನನ್ನ ಸಹೋದರಿ ಇಬ್ಬರೂ ಆರಾಮಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.