ಬೆಳಗಾವಿ, ಡಿ 06 (DaijiworldNews/DB): ಬೆಳಗಾವಿಯಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಕಪ್ಪು ಮಸಿ ಬಳಿದ ಘಟನೆ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಹಿರಂಗ ಸಭೆ ಸಲುವಾಗಿ ಬೆಳಗಾವಿಯತ್ತ ತೆರಳುತ್ತಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುತ್ತಿರುವ ಮಹಾರಾಷ್ಟ್ರ ನೋಂದಣಿಯ ಆರಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಕಪ್ಪು ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ.
ಈ ಲಾರಿಗಳು ಪುಣೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದವು. ಕಲ್ಲು ತೂರಾಟದಿಂದಾಗಿ ಲಾರಿಗಳ ಗಾಜು ಪುಡಿಪುಡಿಯಾಗಿವೆ. ಇನ್ನು ಮಹಾರಾಷ್ಟ್ರ ನೋಂದಣಿಯ ಫಲಕದ ಮೇಲೆ ಕಪ್ಪು ಮಸಿ ಬಳಿದಿದ್ದು, ಮಹಾರಾಷ್ಟ್ರ ನೋಂದಣಿಯ ಇತರ ವಾಹನಗಳ ಮೇಲೂ ಆಕ್ರೋಶ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.