ಬೆಳಗಾವಿ, ಡಿ 06 (DaijiworldNews/DB): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿರುವಾಗಲೇ ಬೆಳಗಾವಿಗೆ ಭೇಟಿ ನೀಡಿಯೇ ಸಿದ್ದ ಎಂದಿದ್ದ ಮಹಾರಾಷ್ಟ್ರ ಸಚಿವರೊಬ್ಬರು ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದು ಬೆಳಗಾವಿ ಭೇಟಿ ರದ್ದುಗೊಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಅವರು ಡಿಸೆಂಬರ್ 6ರಂದು ಬೆಳಗಾವಿಗೆ ಭೇಟಿ ನೀಡಿ ಡಾ. ಬಿ. ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದಂದು ಶ್ರದ್ದಾಂಜಲಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದರು. ಆದರೆ ಇದೀಗ ತಮ್ಮ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದು, ಕರ್ನಾಟಕ ಸರ್ಕಾರ ಬೆಳಗಾವಿ ಭೇಟಿಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಡಿಸೆಂಬರ್ 3ಕ್ಕೆ ಬೆಳಗಾವಿ ಭೇಟಿಗೆ ನಿರ್ಧರಿಸಿದ್ದೆವಾದರೂ, ಕೆಲವೊಂದು ದಲಿತ ಸಂಘಟನೆಗಳ ಮನವಿ ಮೇರೆಗೆ ಡಿಸೆಂಬರ್ 6ರಂದು ಬೆಳಗಾವಿಗೆ ಹೋಗುವುದೆಂದು ಯೋಜಿಸಲಾಗಿತ್ತು. ಆದರೆ ಭೇಟಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ. ಇನ್ನು ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದಂದು ಶ್ರದ್ದಾಂಜಲಿ ಸಲ್ಲಿಕೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಹಾಗೂ ಕಾನೂನು ಸುವ್ಯವಸ್ಥೆಗಳಿಗೆ ಧಕ್ಕೆ ಉಂಟಾಗಬಾರದೆಂದು ಬೆಳಗಾವಿ ಭೇಟಿ ರದ್ದುಗೊಳಿಸಿದ್ದೇವೆಂದು ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುವುದು ಸಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರವೇ ಎಚ್ಚರಿಕೆ ನೀಡಿದ್ದರೂ, ಭೇಟಿ ನೀಡಿಯೇ ಸಿದ್ದ ಎಂದು ಮಹಾ ಸಚಿವರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಹಾ ಸಚಿವರ ಭೇಟಿಗೆ ಬೆಳಗಾವಿ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದರು. ಇದೇ ವೇಳೆ ಎಂಇಎಸ್ ಮತ್ತು ಮಹಾರಾಷ್ಟ್ರ ರಾಜಕೀಯ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕರವೇ ನಾರಾಯಣ ನೇತೃತ್ವದಲ್ಲಿ ಹೋರಾಟಗಾರರ ತಂಡವೊಂದು ʼಕರವೇ ನಡಿಗೆ ಬೆಳಗಾವಿ ಕಡೆಗೆʼ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದೆ ಎಂದು ತಿಳಿದು ಬಂದಿದೆ.