ಮಡಿಕೇರಿ, ಡಿ 05( DaijiworldNews/MS): ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಆರು ತಿಂಗಳ ಹಿಂದೆಯಷ್ಟೇ, ಟ್ರಕ್ಕಿಂಗ್ ಅಥವಾ ಪರ್ವತಾರೋಹಿಗಳು ಕಲಿಯಲು ಇಚ್ಚಿಸುವ ಜಂಗಲ್ ಸರ್ವೈವಲ್ ಕ್ಯಾಂಪಿನಲ್ಲಿ ತರಬೇತಿ ಪಡೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನಮ್ಮೆಲೆ ಗ್ರಾಮದ ಸಮೀಪ ಇರುವ ವೋಟೆಕಾಡ್ ನೇಚರ್ ಕ್ಯಾಂಪ್ ಹೋಂಸ್ಟೇನಲ್ಲಿ ಆರೋಪಿ ಶಾರಿಕ್ ತರಬೇತಿ ಪಡೆದಿದ್ದು , ಈ ಬಗ್ಗೆ ಮಂಗಳೂರು ಪೊಲೀಸರು ಹೋಂ ಸ್ಟೇಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನ ರಾಜನ್ ಎಂಬುವರು ಟ್ರಕ್ಕಿಂಗ್ ಅಥವಾ ಪರ್ವತಾರೋಹಿಗಳಿಗಾಗಿ ಜಂಗಲ್ ಸರ್ವೈವಲ್ ಕ್ಯಾಂಪ್ ಆಯೋಜಿಸಿದ್ದರು. 2022 ರ ಮೇ ತಿಂಗಳ ಕೊನೆಯ ವಾರದಲ್ಲಿ ಅಂದರೆ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಈ ಕ್ಯಾಂಪಿನಲ್ಲಿ ತರಬೇತಿ ಪಡೆದಿದ್ದನು.ಅರಣ್ಯದಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಅಕಸ್ಮಾತ್ ಅರಣ್ಯದಲ್ಲಿ ತಪ್ಪಿಸಿಕೊಂಡಲ್ಲಿ ಅಲ್ಲಿ ಆಹಾರ ಉತ್ಪಾದನೆ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ವಿಚಾರಗಳ ಬಗ್ಗೆ ಕ್ಯಾಂಪಿನಲ್ಲಿ ಹೇಳಿಕೊಡಲಾಗಿತ್ತು. ಹೀಗಾಗಿ ನ್ಹಯೋತ್ಪಾನ ಚಟುವಟಿಕೆ ನಡೆಸುದಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಶಾರೀಕ್ ತರಬೇತಿ ಪಡೆದನಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಹೀಗಾಗಿ ವೋಟೆಕಾಡ್ ನೇಚರ್ ಕ್ಯಾಂಪ್ ನಹೋಂಸ್ಟೇ ಮಾಲೀಕ ನವೀನ್ ಮತ್ತು ಅಲ್ಲಿಯ ಸಿಬ್ಬಂದಿ ರಿಕ್ಕಿ ಎಂಬ ಇಬ್ಬರನ್ನು ಮಂಗಳೂರು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.