ಶಿವಮೊಗ್ಗ, ಡಿ 05( DaijiworldNews/MS): ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆ ಸಿಎಫ್ಐ ಸೇರುವಂತೆ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿರಾಳ ಕೊಪ್ಪದಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು, ಗೋಡೆಗಳು ಮತ್ತು ಬೋರ್ಡ್ಗಳ ಮೇಲೆ ಸಿಎಫ್ಐ'ಗೆ ಸೇರ್ಪಡೆಗೊಳ್ಳಿ ಎಂಬ ಬರಹಗಳು ಕಂಡುಬಂದಿದೆ. ಈ ಗೋಡೆ ಬರಹವನ್ನು ನೀಲಿ ಮತ್ತು ಕೆಂಪು ಬಣ್ಣ ಬಳಸಿ ಬರೆಯಲಾಗಿದ್ದು ಬರಹದ ಮೇಲೆ ಸ್ಟಾರ್ ಗುರುತು ಮಾಡಲಾಗಿದೆ.
ಈ ಬರಹಗಳನ್ನು ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಗಮನಿಸಿದ್ದು, ಅವರ ದೂರಿನ ಆಧಾರದ ಮೇಲೆ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಸರ್ಕಾರ ಪಿಎಫ್ ಐ ಮತ್ತು ಸಿಎಫ್ ಐ ಸಂಘಟನೆಯನ್ನು ನಿಷೇಧಿಸಿದ್ದು, ಸರ್ಕಾರದ ಆದೇಶ ಉಲ್ಲಂಘಿಸಿ ಕೆಲವು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಬಳಿಕ ಪೊಲೀಸರು ಗೋಡೆ ಬರಹಗಳನ್ನು ಅಳಿಸುವ ಕೆಲಸ ಮಾಡಿದ್ದಾರೆ
ಶಿರಾಳಕೊಪ್ಪದಲ್ಲಿ ಸಿಎಫ್ಐಗೆ ಬೆಂಬಲ ಸೂಚಿಸಿ ಬರಹ ಬರೆದಿರುವ ಹಾಗೂ ಬರಹ ಬರೆದವರನ್ನು ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.