ಅನೇಕಲ್ ಡಿ 05(DaijiworldNews/MS): ಮೂರು ದಿನಗಳಿಂದ ನಾಪತ್ತೆಯಾಗಿದ್ದ ಆನೇಕಲ್ ನೆರಳೂರು ಗ್ರಾಮದ ವೃದ್ಧೆ ಪಕ್ಕದ ಮನೆಯ ವಾರ್ಡ್ರೋಬ್ನಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮೂಲದ ಪಾರ್ವತಮ್ಮ (80) ಕೊಲೆಯಾದವರು.
ಪಾರ್ವತಮ್ಮ ಅವರ ಪುತ್ರ ರಮೇಶ್ ಅವರು ನೆರಳೂರಿನಲ್ಲಿ ವಾಸವಿದ್ದರು. 20 ದಿನದ ಹಿಂದೆ ಮೊಮ್ಮಕ್ಕಳನ್ನು ನೋಡಲು ಮಗನ ಮನೆಗೆ ಬಂದಿದ್ದರು. ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ಮಗ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ಮನೆಯ ನಾಲ್ಕನೇ ಮಹಡಿಯಲ್ಲಿ ಒಂಟಿಯಾಗಿ ಬಾಡಿಗೆಗಿದ್ದ ಮಹಿಳೆ ಪಾವಲ್ ಖಾನ್ (26) ಆಗಾಗ ಪಾರ್ವತಮ್ಮ ಅವರನ್ನು ಮನೆಗೆ ಕರೆಯುತ್ತಿದ್ದರು. ಮೂರನೇ ಮಹಡಿಯಲ್ಲಿ ಪಾರ್ವತಮ್ಮ ಅವರ ಪುತ್ರ ರಮೇಶ್ ಹಾಗೂ ಸೊಸೆ ಜ್ಯೋತಿ ಕಳೆದ 9 ತಿಂಗಳಿಂದ ವಾಸವಾಗಿದ್ದರು. ಶುಕ್ರವಾರ ಟ್ಯೂಷನ್ನಿಂದ ಮಕ್ಕಳನ್ನು ಕರೆದುಕೊಂಡು ಬರಲು ಸೊಸೆ ಜ್ಯೋತಿ ಹೊರಗೆ ಹೋಗಿದ್ದರು. ಈ ವೇಳೆ ಪಾರ್ವತಮ್ಮ ನಾಪತ್ತೆಯಾಗಿದ್ದು. ಇವರು ಕಾಣೆಯಾದ ನಂತರ ಪಾವಲ್ ಖಾನ್ ಕೂಡ ಹುಡುಕಾಟ ನಡೆಸಿದ್ದು, ಮೂರನೇ ದಿನ ಆಕೆಯೂ ನಾಪತ್ತೆಯಾಗಿದ್ದರು.
ಅನುಮಾನಗೊಂಡ ವೃದ್ಧೆಯ ಕುಟುಂಬದದವರು ಮನೆ ಮಾಲೀಕ ಅಂಬರೀಷ್ ಅವರಿಗೆ ವಿಷಯ ತಿಳಿಸಿದರು. ಆರೋಪಿ ಮಹಿಳೆ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಮಾಲೀಕರು ತಮ್ಮಲ್ಲಿದ್ದ ಮತ್ತೊಂದು ಕೀ ಬಳಸಿ ಬಾಗಿಲು ತೆರೆದಾಗ ಕೃತ್ಯ ಗೊತ್ತಾಗಿದೆ. ಮನೆಯಲ್ಲಿ ವಾಸನೆ ಆವರಿಸಿತ್ತು. ಕಪಾಟು ತೆರೆದಾಗ ಪಾರ್ವತಮ್ಮನವರ ಶವವು ಪತ್ತೆಯಾಗಿದೆ. ಅವರ ಕೈ, ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಸಾಯಿಸಿದ ನಂತರ ಶವವನ್ನು ಕಪಾಟಿನಲ್ಲಿಟ್ಟು, ಆಭರಣಗಳೊಂದಿಗೆ ಪಾವಲ್ ಖಾನ್ ಪರಾರಿಯಾಗಿದ್ದಾಳೆ. ಪಾವಲ್ ಖಾನ್ ಮನೆಯಲ್ಲಿ ದೊರೆತ ಆಧಾರ್ ಕಾರ್ಡ್ನಲ್ಲಿ ಬೆಂಗಳೂರಿನ ಹೊಂಗಸಂದ್ರದ ಮನೆ ವಿಳಾಸವಿದೆ.
"ಆರೋಪಿ ಮುಸ್ಲಿಂ ಮಹಿಳೆ ಪಾಯಲ್ ಖಾನ್ ಅವರನ್ನು 3 - 4 ಬಾರಿ ನೋಡಿದ್ದೆ. ಅವರು 8 ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದರು. ಅವರು ಕೆಳಗಡೆಯ ಮನೆಯ ಮೂಲಕವೇ ಬಾಡಿಗೆಯನ್ನು ನೀಡುತ್ತಿದ್ದರು ಹಾಗೂ ಒಬ್ಬರೇ ವಾಸವಾಗಿದ್ದರು. ಏನು ಕೆಲಸ ಮಾಡುತ್ತಿದ್ದರೆಂದು ಗೊತ್ತಿಲ್ಲ. ಆದರೆ, ಕಳೆದ ತಿಂಗಳು ಅಣ್ಣನಿಗೆ ಅಪಘಾತವಾಗಿದೆ, ಈ ತಿಂಗಳ ಬಾಡಿಗೆಯನ್ನು ಮುಂದಿನ ತಿಂಗಳು ಸೇರಿಸಿ ಕೊಡುತ್ತೇನೆ ಎಂದಿದ್ದರು. ಇನ್ನೊಂದೆಡೆ, ಅಜ್ಜಿಯ ಕುಟುಂಬದವರು ಸಹ 10 ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದರು. ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿತ್ತು" ಎಂದು ಮನೆಯ ಮಾಲೀಕ ಅಂಬರೀಶ್ ಹೇಳಿದ್ದಾರೆ.