ಹುಬ್ಬಳ್ಳಿ, ಡಿ 04 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಯಸಿದ್ದಲ್ಲಿ ಕಲಘಟಗಿ ಕ್ಷೇತ್ರವನ್ನು ಅವರಿಗೆ ಬಿಟ್ಟು ಕೊಡಲು ಸಿದ್ದ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯ ಅವರಿಗೆ ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ರಾಜ್ಯದ ವಿವಿಧೆಡೆಗಳಿಂದ ಆಹ್ವಾನಗಳು ಬರುತ್ತಿವೆ. ಒಂದು ವೇಳೆ ಅವರು ಕಲಘಟಗಿಯಿಂದ ಸ್ಪರ್ಧಿಸಲು ಬಯಸಿದ್ದಲ್ಲಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ನಾನು ಸಿದ್ದನಿದ್ದೇನೆ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಾನು ನಡೆಸುತ್ತಿರುವುದು ರಾಜಕೀಯ ಉದ್ದೇಶದಿಂದ ಅಲ್ಲ. ಇದು ಹೊಸ ಕಾರ್ಯಕ್ರಮವೂ ಅಲ್ಲ. ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈ ಬಾರಿ 4000 ಸಾಮೂಹಿಕ ವಿವಾಹ ಮಾಡುವ ಉದ್ದೇಶವಿದ್ದು, ವಿಶ್ವದಾಖಲೆಯೂ ಆಗಬಹುದು. ಈಗಾಗಲೇ 1200 ವಿವಾಹ ಮಾಡಿಸಿದ್ದೇನೆ ಎಂದವರು ತಿಳಿಸಿದರು.
ಬಿಜೆಪಿಯವರು ಅಭಿವೃದ್ದಿ ಬಯಸುತ್ತಿಲ್ಲ. ಅವರಿಗೆ ವಿವಾದಗಳ ಮೂಲಕ ರಾಜಕೀಯ ಮಾಡುವುದೇ ಬೇಕಾಗಿರುವುದು. ವಿಪಕ್ಷಗಳು ಆಡಳಿತ ಪಕ್ಷದ ಲೋಪಗಳನ್ನು ತೋರಿಸಿದರೆ ಅದಕ್ಕೆ ಪ್ರತಿ ಹೇಳಿಕೆ ನೀಡುವುದಷ್ಟೇ ಅವರ ಕೆಲಸವೇ ಹೊರತು ಅಭಿವೃದ್ದಿಗೆ ಮುಂದಾಗುತ್ತಿಲ್ಲ ಎಂದವರು ಇದೇ ವೇಳೆ ದೂರಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮರಾಠ ಸಮುದಾಯದಿಂದ ಬಂದವನು. ಆದರೆ ಕರ್ನಾಟಕದಲ್ಲಿದ್ದಾಗ ನಾವು ನಮ್ಮ ಭೂಮಿ, ಭಾಷೆ ಬಗ್ಗೆ ಗೌರವ ಹೊಂದಬೇಕು. ಗಡಿ ವಿವಾದ ಹಲವು ಸಮಯದಿಂದಲೇ ನಡೆಯುತ್ತಿದ್ದು, ಸದ್ಯ ಕೋರ್ಟ್ನಲ್ಲಿರುವುದರಿಂದ ಅದರ ವಿಚಾರವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದ ನಾಯಕರು ಈ ಬಗ್ಗೆ ಧ್ವನಿ ಎತ್ತಬೇಕು. ನಾವೂ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.