ಬರ್ವಾನಿ (ಮಧ್ಯಪ್ರದೇಶ), ಡಿ 04 (DaijiworldNews/DB): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಶಿಕ್ಷಕರೊಬ್ಬರಿಗೆ ಅಮಾನತು ಶಿಕ್ಷೆ ನೀಡಲಾಗಿದೆ.
ಮಧ್ಯಪ್ರದೇಶದ ಬರ್ವಾನಿ ಕನಸ್ಯ ಜಿಲ್ಲೆಯ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ್ ಕನ್ನೋಜೆ ಅಮಾನತುಗೊಂಡವರು. ಶಿಕ್ಷಕನನ್ನು ನವೆಂಬರ್ 25ರಂದು ಅಮಾನತುಗೊಳಿಸಲಾಗಿದ್ದು, ಸಾಮಾಜಿಕ ತಾಣದಲ್ಲಿ ಅಮಾನತು ಆದೇಶ ಕಾಣಿಸಿಕೊಂಡ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
ವೃತ್ತಿಪರ ನಡವಳಿಕೆಯನ್ನು ನಿಯಂತ್ರಿಸುವ ನಿಯಮಾವಳಿ ಉಲ್ಲಂಘಿಸಿ ಕನ್ನೋಜಿ ಅವರು ರಾಜಕೀಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಇದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ಎನ್.ಎಸ್.ರಘುವಂಶಿ ಆದೇಶದಲ್ಲಿ ತಿಳಿಸಿದ್ದಾರೆ.
ಕನ್ನೋಜಿ ಅವರು ಕೆಲಸವೊಂದರ ನಿಮಿತ್ತ ರಜೆ ಕೋರಿದ್ದರು. ಆದರೆ ಅದೇ ರಜೆಯನ್ನು ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸೇವಾ ನೀತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದವರು ವಿವರಿಸಿದ್ದಾರೆ.