ಚೆನ್ನೈ, ಡಿ 04 (DaijiworldNews/DB): ಕೋವಿಡ್ನಿಂದಾಗಿ ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡು ಹಿಂದಿರುಗಿದ್ದ ತಿರುಚ್ಚಿ ಮೂಲದ ಪ್ರೊಫೆಸರ್ವೊಬ್ಬರಿಗೆ ಆನ್ಲೈನ್ ವಂಚಕರು 23.5 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ತಿರುಚ್ಚಿ ಜಿಲ್ಲೆಯ ಮುಸ್ರಿ ತಾಲೂಕಿನ ತಿರುಮುರುಗನ್ ನಗರದ ಪ್ರೇಮ್ ನವಾಸ್ ಅವರೇ ವಂಚನೆಗೆ ಒಳಗಾದವರು. ಆನ್ಲೈನ್ ಉದ್ಯೋಗ ಸೈಟ್ಗಳ ಮೂಲಕ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದ ಪ್ರೇಮ್ ನವಾಸ್ ಅವರನ್ನು ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಮಾಸಿಕ 6 ಲಕ್ಷ ರೂ. ವೇತನದ ಭರವಸೆ ನೀಡಿ ಪ್ರೊಫೆಸರ್ ಹುದ್ದೆಗೆ ವ್ಯಕ್ತಿಯೊಬ್ಬ ಸಂಪರ್ಕಿಸಿದ್ದ. ಆತನನ್ನು ನಂಬಿ ಆತ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಮೂರು ಕಂತುಗಳಲ್ಲಿ ಪ್ರೇಮ್ ಹಣ ಜಮೆ ಮಾಡಿದ್ದಾರೆ. ನೋಂದಣಿ ಶುಲ್ಕ, ಪ್ರಮಾಣಪತ್ರ ಪರೀಶೀಲನೆ, ಸಿಂಗಾಪುರ ರಾಷ್ಟ್ರೀಯ ವಿವಿಯಿಂದ ನಿರಾಕ್ಷೇಪಣಾ ಪತ್ರಕ್ಕಾಗಿ ಹಣ ನೀಡಬೇಕೆಂದು ಆತ ಹೇಳಿದ ಮೇರೆಗೆ ಪ್ರೇಮ್ ಹಣ ಜಮೆ ಮಾಡಿದ್ದಾರೆ. ಆದರೆ ಬಳಿಕ ಹಣವೂ ನೀಡದೇ, ಉದ್ಯೋಗವನ್ನೂ ನೀಡದೆ ಆತ ವಂಚಿಸಿದ್ದಾನೆ ಎಂದು ಪ್ರೊಫೆಸರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆತ ತನ್ನೊಂದಿಗೆ ಸ್ಕೈಪ್ ಮೂಲಕ ಮಾತನಾಡಿದ್ದು, ಮೂರು ವಿಭಿನ್ನ ಫೋನ್ ಸಂಖ್ಯೆ, ಸ್ಕೈಪ್ ಐಡಿ ಮತ್ತು ಎರಡು ಇಮೇಲ್ ಐಡಿ ಮೂಲಕ ಸಂಪರ್ಕಿಸಿದ್ದ ಎಂದು ಮಾಹಿತಿ ನೀಡಿದ್ದು, ಅದರಂತೆ ಸೈಬರ್ ವಿಭಾಗವು ಎಲ್ಲಾ ಆಯಾಮಗಳಿಂದ ಆರೋಪಿ ಪತ್ತೆಗಾಗಿ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.