ನವದೆಹಲಿ, ಡಿ 04 (DaijiworldNews/DB): ಪಕ್ಷದ ಸಾಂಸ್ಥಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಗುರಿ ಸಾಧನೆಗೆ ಸಾಧ್ಯವಾಗದವರು ಸಹದ್ಯೋಗಿಗಳಿಗೆ ದಾರಿ ಮಾಡಿಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ.
ತಾವು ರಚಿಸಿದ ಕಾಂಗ್ರೆಸ್ ಸ್ಟೀರಿಂಗ್ ಕಮಿಟಿಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಒಂದರಿಂದ ಮೂರು ತಿಂಗಳೊಳಗಾಗಿ ಜನರ ಸಮಸ್ಯೆಗಳಿಗೆ ಸಂಬಂಧಿಸಿ ಚಳುವಳಿ ಕುಇತ ಮಾರ್ಗಸೂಚಿಗಳನ್ನು ನೀಡಬೇಕು ಎಂದು ರಾಜ್ಯ ಉಸ್ತುವಾರಿಗಳಿಗೆ ಸೂಚನೆ ನೀಡಿದರು.
ಪಕ್ಷ ಮತ್ತು ದೇಶದ ಸುಸ್ಥಿತಿಗಾಗಿ ಉನ್ನತ ಮಟ್ಟದಿಂದ ಕೆಳಮಟ್ಟದವರೆಗೂ ಎಲ್ಲರೂ ಸಾಂಸ್ಥಿಕ ಹೊಣೆಯನ್ನು ನಿಭಾಯಿಸಬೇಕು. ಪಕ್ಷ ಬಲಿಷ್ಠವಾಗಿದ್ದರೆ, ಜನರ ನಿರೀಕ್ಷೆಯಂತೆ ನಡೆದುಕೊಂಡಲ್ಲಿ ಚುನಾವಣೆಗಳನ್ನು ಎದುರಿಸಿ, ಗೆಲುವು ಸಾಧಿಸುವುದು ಮತ್ತು ಆ ಗೆಲುವಿನ ಪ್ರತಿಫಲವನ್ನು ಜನಸೇವೆ ಮೂಲಕ ನೀಡುವುದು ಸಾಧ್ಯವಾಗುತ್ತದೆ ಎಂದರು.
ಪಕ್ಷದಲ್ಲಿ ಕೆಲವರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಇನ್ನು ಕೆಲವರು ಜವಾಬ್ದಾರಿಯ ಕಡೆಗೆ ನಿರ್ಲಕಕ್ಷ್ಯ ತೋರುತ್ತಿದ್ದಾರೆ. ಅಂತಹವರು ತಮ್ಮ ಸಹದ್ಯೋಗಿಗಳಿಗೆ ದಾರಿ ಮಾಡಿಕೊಡಬೇಕಾಗುತ್ತದೆ ಎಂದು ಇದೇ ವೇಳೆ ಸೂಚ್ಯವಾಗಿ ಹೇಳಿದರು.
ದ್ವೇಷ ಬೀಜ ಬಿತ್ತುವ ಮತ್ತು ವಿಭಜನೆ ಫಲ ಕೊಯ್ಯುವ ಶಕ್ತಿಗಳ ವಿರುದ್ದ ನಾವು ಸದಾ ಹೋರಾಡಬೇಕು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇತಿಹಾಸ ಬರೆಯುತ್ತಿದ್ದು, ಇದೊಂದು ಆಂದೋಲನವಾಗಿ ರೂಪುಗೊಂಡಿದೆ ಎಂದು ಇದೇ ವೇಳೆ ಖರ್ಗೆ ತಿಳಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲಾ, ಹಿರಿಯ ನಾಯಕರಾದ ಪಿ. ಚಿದಂಬರಂ, ಆನಂದ್ ಶರ್ಮಾ, ಮೀರಾ ಕುಮಾರ್, ಅಂಬಿಕಾ ಸೋನಿ ಸಭೆಯಲ್ಲಿ ಭಾಗವಹಿಸಿದ್ದರು.