ಕೇರಳ, ಡಿ 04 (DaijiworldNews/DB): ಇದೇ ಮೊದಲ ಬಾರಿ ಕೇರಳ ಹೈಕೋರ್ಟ್ ತನ್ನ ವಿಚಾರಣೆಯನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಿದೆ.
ಶಬರಿಮಲೆಯ ಮೇಲ್ಶಾಂತಿ ಹುದ್ದೆಗೆ ಮಲಯಾಳ ಬ್ರಾಹ್ಮಣರಿಂದ ಮಾತ್ರ ಅರ್ಜಿ ಆಹ್ವಾನಿಸಿರುವ ದೇವಸ್ವಂ ಮಂಡಳಿ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶನಿವಾರ ನಡೆಸಿದ ನ್ಯಾಯಾಲಯವು ವಿಶೇಷ ಅಧಿವೇಶನವನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಿತು. ಪ್ರಕರಣದ ಅರ್ಜಿದಾರರಲ್ಲೋರ್ವರಾದ ಸಿಜಿತ್ ಟಿ.ಎಲ್. ಅವರ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ವಿಶೇಷ ಅಧಿವೇಶನ ಯೂಟ್ಯೂಬ್ನಲ್ಲಿ ನೇರಪ್ರಸಾರಗೊಂಡಿತು. ಇನ್ನು ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಲಾಗಿದೆ.
ಭಾರತದಲ್ಲಿ ಮೊದಲ ಬಾರಿಗೆ 2020ರ ಅಕ್ಟೋಬರ್ನಲ್ಲಿ ಗುಜರಾತ್ ಹೈಕೋರ್ಟ್ ಯೂಟ್ಯೂಬ್ ಮೂಲಕ ಲೈವ್-ಸ್ಟ್ರೀಮಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿತು. ಆ ಬಳಿಕ ನೃಈಗಾಗಲೇ ಗುಜರಾತ್, ಗೌಹಾಟಿ, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ, ಪಾಟ್ನಾ, ಜಾರ್ಖಂಡ್, ಮೇಘಾಲಯ ಮತ್ತು ತೆಲಂಗಾಣ ಹೈಕೋರ್ಟ್ಗಳು ತಮ್ಮ ವಿಚಾರಣೆಯನ್ನು ಯೂಟ್ಯೂಬ್ನಲ್ಲಿ ನೇರಪ್ರಸಾರ ಮಾಡಿವೆ. ಇದೀಗ ಆ ಸಾಲಿಗೆ ಕೇರಳ ಹೈಕೋರ್ಟ್ ಕೂಡಾ ಸೇರಿಕೊಂಡಿದೆ.
ಇನ್ನು 2022 ಆಗಸ್ಟ್ 26ರಂದು ನಿವೃತ್ತ ಸಿಜಿಐ ಎನ್.ವಿ. ರಮಣ ಅವರ ಅಧಿಕಾರಾವಧಿಯ ಕೊನೆಯ ಕೆಲಸದ ದಿನದಂದು ಸುಪ್ರೀಂಕೋರ್ಟ್ ಕೂಡಾ ತನ್ನ ಕಲಾಪಗಳನ್ನು ಲೈವ್ ಸ್ಟ್ರೀಮ್ ಮಾಡಿತ್ತು.