ಚೆನ್ನೈ, ಡಿ 03(DaijiworldNews//DB): ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಕಳೆದೊಂದು ವರ್ಷದಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ಆರೋಪದ ಮೇಲೆ ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರೋಡ್ ಜಿಲ್ಲೆಯ ತೊಪ್ಪುಪಾಳಯಂ ಗ್ರಾಮದಲ್ಲಿರುವ ಯೂನಿಯನ್ ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆ. ಗೀತಾರಾಣಿ (53) ಬಂಧಿತ ಶಿಕ್ಷಕಿ.
ಈಕೆ ಶಾಲೆಯಲ್ಲಿದ್ದ ಆರು ಮಂದಿ ದಲಿತ ಮಕ್ಕಳಿಂದ ಬಲವಂತವಾಗಿ ಶಾಲೆಯ ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿದ್ದರು. ಕಳೆದೊಂದು ವರ್ಷದಿಂದ ಇದೇ ರೀತಿ ಕೆಲಸ ಮಾಡಿಸುತ್ತಿದ್ದರು. ಮುಖ್ಯೋಪಾಧ್ಯಾಯಿನಿಯ ಈ ಕೃತ್ಯದಿಂದ ಬೇಸತ್ತ ಐದನೇ ತರಗತಿ ವಿದ್ಯಾರ್ಥಿಯೊಬ್ಬನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಗೀತಾರಾಣಿ ಪರಾರಿಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಮುಖ್ಯೋಪಾಧ್ಯಾಯಿನಿಗಾಗಿ ತೀವ್ರ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಶೌಚಾಲಯ ಸ್ವಚ್ಚಗೊಳಿಸುತ್ತಿರುವ ವಿಚಾರವನ್ನು ತಾಯಿಗೆ ತಿಳಿಸಿದ್ದಾನೆ. ಇತರ ಐದು ಮಂದಿ ವಿದ್ಯಾರ್ಥಿಗಳಿಂದಲೂ ಸ್ವಚ್ಚಗೊಳಿಸಿರುವುದಾಗಿ ಹೇಳಿಕೊಂಡಿದ್ದಾನೆ. ಶಿಕ್ಷಕಿಯನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.