ಜಬಲ್ಪುರ, ಡಿ 03(DaijiworldNews//DB): ಸರ್ಕಾರಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಹಲವು ವಾಹನಗಳಿಗೆ ಢಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಮಧ್ಯ ಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ನಗರ ಸಾರಿಗೆ ಬಸ್ನ ಚಾಲಕ ಹರದೇವ್ಪಾಲ್ ಸಿಂಗ್ (50) ಅವರಿಗೆ ಹೃದಯಾಘಾತವಾಗಿದ್ದು, ದಮೋಹ್ ನಾಕಾ ಚೌಕದ ಟ್ರಾಫಿಕ್ ಸಿಗ್ನಲ್ನಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಚಲಿಸಿದೆ. ಇದರಿಂದ ಸಿಗ್ನಲ್ನಲ್ಲಿ ಮುಂದೆ ನಿಂತಿದ್ದ ಇ-ರಿಕ್ಷಾ, ಬೈಕ್ ಸೇರಿ ವಿವಿಧ ವಾಹನಗಳಿಗೆ ಢಿಕ್ಕಿ ಹೊಡಿದೆ. ಮೋಟಾರ್ ಸೈಕಲ್ವೊಂದು ಬಸ್ ಚಕ್ರಕ್ಕೆ ಸಿಲುಕಿಕೊಂಡು ನಿಂತಿತ್ತು ಎಂದು ಗೋಹಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ತಿವಾರಿ ತಿಳಿಸಿದ್ದಾರೆ.
ಚಾಲಕ ಸ್ಟೇರಿಂಗ್ ಮೇಲೆ ಬಿದ್ದಿರುವುದನ್ನು ನೋಡಿ ಕೂಡಲೇ ಬಸ್ ಪ್ರಯಾಣಿಕರು ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು. ಇನ್ನು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ 62 ವರ್ಷದ ವ್ಯಕ್ತಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.