ಬೆಂಗಳೂರು, ಡಿ 03(DaijiworldNews/MS): ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಚಿರತೆ, ಆನೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಇವುಗಳ ಯಶಸ್ವಿ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲು ತೀರ್ಮಾನಿಸಲಾಗಿದೆ ಚಿರತೆ ದಾಳಿಯಿಂದ ಮೃತಪಟ್ಟರೆ 15 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರು ಸುತ್ತಮುತ್ತ ಕೂಡ ಚಿರತೆ ಪ್ರವೇಶಿಸಿದ್ದು, ಕೂಡಲೇ ಅವುಗಳನ್ನು ಜೀವಂತ ಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆಎಂದರು.
ಚಿರತೆಗಳು ಕಾಡು ತೊರೆದು ಆಹಾರ ಅರಸಿ ನಾಡಿಗೆ ಪ್ರವೇಶ ಮಾಡುತ್ತಿವೆ. ಇವುಗಳನ್ನು ಜೀವಂತ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲು ನಿರ್ದೇಶಿಸಿದ್ದೇನೆ .ಆನೆ ದಾಳಿಯಲ್ಲಿ ಮೃತಪಟ್ಟವರಿಗೆ ನೀಡುವಂತೆ ಚಿರತೆ ದಾಳಿ ಮೃತರಿಗೂ ೧೫ ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.