ತಿರುವಣ್ಣಾಮಲೈ, ಡಿ 02 (DaijiworldNews/DB): ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ದೇವಸ್ಥಾನದಲ್ಲಿ ದೇವತೆ ವಿಗ್ರಹದ ಮುಖಕ್ಕೆ ಸಿಸಿಟಿವಿ ಅಳವಡಿಸಿರುವುದಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಮಗಳ ಬಗ್ಗೆ ಡಿಎಂಕೆ ಸರ್ಕಾರಕ್ಕೆ ನಂಬಿಕೆ ಇಲ್ಲ. ನಾಸ್ತಿಕರು ಹಿಂದೂ ದೇವಾಲಯಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡ ಕಾರಣ ದೇವರ ಮುಖಕ್ಕೆ ಸಿಸಿಟಿವಿ ಅಳವಡಿಸುವಂತಹ ಪರಿಸ್ಥಿತಿ ಉಂಟಾಗಿದೆ ಎಂದವರು ಕಿಡಿ ಕಾರಿದ್ದಾರೆ.
ಅಲ್ಪಸಂಖ್ಯಾಕರ ಓಲೈಕೆಗಾಗಿ ಡಿಎಂಕೆ ಸರ್ಕಾರ ಈ ಕೃತ್ಯಗಳಿಗೆಲ್ಲ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿರುವ ಅವರು, ದೇವತೆ ಮೂರ್ತಿಯನ್ನು ವಿರೂಪಗೊಳಿಸುವ ಅಧಿಕಾರವನ್ನು ಇವರಿಗೆ ನೀಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯು ದೇವರ ಮೂರ್ತಿಗಳ ಮೇಲಿರುವ ಬಂಗಾರ ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾಡುತ್ತಿದ್ದು, ಭ್ರಷ್ಟಾಚಾರಕ್ಕೆ ಇದೊಂದು ಹಾದಿ ಮಾಡಿಕೊಡುವಂತಹ ಕ್ರಮವಾಗಿದೆ. ದೇವರು ಮತ್ತು ಜನ ಇಂತಹುವುಗಳನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದವರು ತಿಳಿಸಿದ್ದಾರೆ.