ನವದೆಹಲಿ, ಡಿ 02 (DaijiworldNews/DB): ಲುಧಿಯಾನ ಕೋರ್ಟ್ ಸ್ಫೋಟ ಪ್ರಕರಣದ ಆರೋಪಿ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಬಂಧಿಸಿದೆ.
ಮಲೇಷ್ಯಾದಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆಯಲಾಯಿತು. ಈತ 2021ರಲ್ಲಿ ನಡೆದ ಲುಧಿಯಾನ ಕೋರ್ಟ್ ಸ್ಪೋಟದಲ್ಲಿ ಸಂಚುಕೋರನಾಗಿದ್ದ. ಈ ಪ್ರಕರಣದ ಪ್ರಮುಖ ಆರೋಪಿ ಪಾಕ್ ಮೂಲದ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡೆಗೆ ಈತ ಸಹಾಯಕನಾಗಿ ಕೆಲಸ ಮಾಡಿದ್ದ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದರು.
ಇನ್ನು ಹಲವಾರು ಅಪರಾಧ ಪ್ರಕರಣಗಳಲ್ಲಿಯೂ ಈತ ಪೊಲೀಸರಿಗೆ ಬೇಕಾಗಿದ್ದ. ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಎನ್ಐಎ ಈ ಹಿಂದೆ ಘೋಷಿಸಿತ್ತು. ಅಲ್ಲದೆ, ಎನ್ಐಎ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು.