ರಾಮನಗರ, ಡಿ 02 (DaijiworldNews/DB): 15 ರೂ. ವಿದ್ಯುತ್ ಬಿಲ್ ಪಾವತಿಗೆ ಬಾಕಿ ಉಳಿದಿದೆ ಎಂದು ಲಿಂಕ್ ಕಳಿಸಿ ಪಾವತಿ ಮಾಡಲು ಹೇಳುವ ಮೂಲಕ ವ್ಯಕ್ತಿಯೊಬ್ಬರಿಗೆ ವಂಚಕರು 7 ಲಕ್ಷ ರೂ.ಗಳನ್ನು ವಂಚಿಸಿರುವ ಘಟನೆ ಬಿಡದಿಯಲ್ಲಿ ನಡೆದಿದೆ.
ಬಿಡದಿ ಪಟ್ಟಣದ ರಾಘವೇಂದ್ರ ಲೇಔಟ್ ನಿವಾಸಿ ಮಂಜುನಾಥ್ ವಂಚನೆಗೊಳಗಾದವರು. ಮಂಜುನಾಥ್ ಅವರ ಮೊಬೈಲ್ಗೆ ನವೆಂಬರ್ 27ರಂದು ಎಸ್ಎಂಎಸ್ ಬಂದಿದ್ದು, 15 ರೂ. ವಿದ್ಯುತ್ ಬಿಲ್ನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದು, ಪಾವತಿ ಮಾಡದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂಬುದಾಗಿ ಲಿಂಕ್ ಕಳುಹಿಸಲಾಗಿತ್ತು. ಇದು ವಂಚನೆ ಎಂಬುದು ಅರಿಯದೆ ಮಂಜುನಾಥ್ ಅವರು ಲಿಂಕ್ ಓಪನ್ ಮಾಡಿ ತಮ್ಮ ಐಸಿಐಸಿಐ ಬ್ಯಾಂಕ್ನ ಡೆಬಿಟ್ ಕಾರ್ಡ್ ನಂಬರ್, ಪಾನ್ ಕಾರ್ಡ್ ನಂಬರ್ ನಮೂದಿಸಿ ಸಬ್ಮಿಟ್ ಕೊಟ್ಟಿದ್ದಾರೆ. ತತ್ಕ್ಷಣ ಅವರ ಖಾತೆಯಿಂದ 15 ರೂ. ಕಡಿತಗೊಂಡಿದೆ. ಆ ಬಳಿಕ ನಿಮ್ಮ ಖಾತೆಗೆ 24 ಲಕ್ಷ ರೂ. ನಗದು ಜಮೆಯಾಗಿರುವುದಾಗಿ ಇಮೇಲ್ ಸಂದೇಶವೊಂದು ಬಂದಿದೆ.
ಇದರಿಂದ ಆತಂಕಕ್ಕೊಳಗಾದ ಅವರಿಗೆ ಕೆಲ ಹೊತ್ತಿನ ಬಳಿಕ ಒಟ್ಟು ಏಳು ಸಂದೇಶಗಳು ಮೇಲ್ ಬಂದಿದ್ದು, ಮೇಲ್ ತೆರೆದು ನೋಡಿದಾಗ 7 ಲಕ್ಷ ರೂ. ಹಣ ಖಾತೆಯಿಂದ ಕಡಿತಗೊಂಡಿತ್ತು. ಕೂಡಲೇ ಬ್ಯಾಂಕ್ ಕಸ್ಟಮರ್ ಕೇರ್ಗೆ ಕರೆ ಮಾಡಿ ತಮ್ಮ ಖಾತೆಯನ್ನು ಬ್ಲಾಕ್ ಮಾಡಿಸಿ ರಾಮನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ವಂಚನೆಯಾಗಿರುವ ಕುರಿತು ಮಾತನಾಡಿದ ಮಂಜುನಾಥ್, ತಮಗೆ ಆದ ಹಣ ನಷ್ಟಕ್ಕೆ ಪೂನಾದ ಐಸಿಐಸಿಐ ಬ್ಯಾಂಕ್ನವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.