ಅಹಮದಾಬಾದ್, ಡಿ 01 (DaijiworldNews/DB): ನನ್ನನ್ನು ಅವಮಾನಿಸಲು ಕಾಂಗ್ರೆಸ್ನಲ್ಲಿ ಪೈಪೋಟಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಗುಜರಾತ್ನ ಕಲೋಲ್ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಂದು ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತನ್ನನ್ನು ಗುರಿಯಾಗಿಸಿಕೊಂಡು ರಾವಣನ ಹತ್ತು ತಲೆಗಳಿಗೆ ಹೋಲಿಕೆ ಮಾಡಿರುವುದರ ಕುರಿತು ಕಿಡಿ ಕಾರಿದರು.
ನನ್ನ ವಿರುದ್ದ ಕಟುವಾದ ಪದ ಬಳಕೆಗೆ, ನನ್ನನ್ನು ಅವಮಾನಿಸಲು ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿಯೇ ಇದೆ. ಮೋದಿ ಹಿಟ್ಲರ್ ಸಾಯುತ್ತಾರೆಂದು, ಅವಕಾಶ ಸಿಕ್ಕರೆ ನಾನೇ ಮೋದಿಯನ್ನು ಸಾಯಿಸುತ್ತೇನೆಂದು ಕೆಲ ದಿನಗಳ ಹಿಂದಷ್ಟೇ ಆ ಪಕ್ಷದ ನಾಯಕರಿಬ್ಬರು ಹೇಳಿದ್ದರು. ಇನ್ಯಾರೋ ರಾವಣ, ರಾಕ್ಷಸ, ಜಿರಳೆ ಎಂದೆಲ್ಲ ಹೇಳುತ್ತಾರೆ ಎಂದು ಪ್ರಧಾನಿ ಮೋದಿ ಕುಟುಕಿದರು.
ಅಹಮದಾಬಾದ್ನಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ರ್ಯಾಲಿ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುತ್ತಾ, ಪ್ರಧಾನಿ ಮೋದಿಯವರು ತಮ್ಮ ಕೆಲಸ ಮರೆತು ಪಾಲಿಕೆ, ಎಂಎಲ್ಎ, ಎಂಪಿ ಚುನಾವಣೆಗಳಲ್ಲಿ ಅಲ್ಲಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ನನ್ನನ್ನು ನೋಡಿ ಮತ ನೀಡಿ ಎನ್ನುತ್ತಾರೆ. ಎಷ್ಟು ಬಾರಿ ಅವರ ಮುಖ ನೋಡುವುದು? ಅವರಿಗೆ ರಾವಣನಂತೆ 100 ತಲೆಗಳಿವೆಯೇ?" ಎಂದು ಪ್ರಶ್ನಿಸಿದ್ದರು. ಖರ್ಗೆಯವರ ಈ ಹೇಳಿಕೆ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿತ್ತು.