ಬೆಂಗಳೂರು, ಡಿ 01 (DaijiworldNews/MS): ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ 10 ಕಾಲೇಜು ನಿರ್ಮಿಸುವ ವಿಚಾರ ಇದೀಗ ತಿರುವು ಪಡೆದುಕೊಂಡಿದ್ದು , ಇಂಥಹ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರದ ಮುಂದೆ ಈ ರೀತಿಯ ಚಿಂತನೆ ಇಲ್ಲ ಹಾಗೇ ಪ್ರಸ್ಥಾವನೆಯೂ ಬಂದಿಲ್ಲ. ಪ್ರತ್ಯೇಕವಾಗಿ ಮುಸ್ಲಿಂ ಕಾಲೇಜುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಇಂತಹ ಪ್ರಸ್ತಾಪ ಇದ್ದರೆ ವಕ್ಪ್ ಬೋರ್ಡ್ ಅಧ್ಯಕ್ಷರೇ ನನ್ನ ಜೊತೆ ಚರ್ಚಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ ಇದೇ ವಿಚಾರವಾಗಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಯೂ ಪ್ರತಿಕ್ರಿಯಿಸಿದ್ದು, " ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಅಥವಾ ಕಡತ ಸರಕಾರದ ಮುಂದೆ ಇಲ್ಲ ಈಗಾಗಲೇ ಸರಕಾರ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ವಕ್ಪ್ ಬೋರ್ಡ್ ಅಧ್ಯಕ್ಷರೇ ಸ್ಪಷ್ಟಪಡಿಸಲಿದ್ದಾರೆ" ಎಂದು ಸಚಿವೆ ತಿಳಿಸಿದ್ದಾರೆ
ಈ ಮೂಲಕ ತೀವ್ರ ಚರ್ಚೆಗೆ ಕಾರಣವಾದ ಮುಸ್ಲಿಂ ಕಾಲೇಜು ಸ್ಥಾಪನೆ ವಿಚಾರ ತಿರುವು ಪಡೆದಿದೆ.