ನವದೆಹಲಿ, ಡಿ 01 (DaijiworldNews/DB): ವೈವಾಹಿಕ ವಿವಾದ, ಜಾಮೀನು ವಿಚಾರ ಸೇರಿ ಇತರ ಅರ್ಜಿಗಳ ವಿಚಾರಣೆಗೆಂದೇಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಅವರು ಮಹಿಳಾ ಪೀಠವೊಂದನ್ನು ರಚಿಸಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಸೇರಿದಂತೆ ಎಲ್ಲಾ ಮಹಿಳೆಯರು ಈ ಪೀಠದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ವೈವಾಹಿಕ ವಿವಾದ, ಜಾಮೀನು ಸೇರಿದಂತೆ ಮತ್ತಿತರ ಕೆಲವು ಅರ್ಜಿಗಳ ವಿಚಾರಣೆ ಈ ಪೀಠದಲ್ಲಿ ಮುಂದೆ ನಡೆಯಲಿದೆ. ವೈವಾಹಿಕ ವಿವಾದಕ್ಕೆ ಸಂಬಂಧಿಸಿದ 10 ವರ್ಗಾವಣೆ ಅರ್ಜಿಗಳು, 10 ಜಾಮೀನು ವಿಚಾರಗಳು ಸೇರಿ ಒಟ್ಟು 32 ವಿಷಯಯಗಳು ಈ ಪೀಠದಲ್ಲಿಯೇ ವಿಚಾರಣೆಗೆ ಬರಲಿದೆ.
ಇನ್ನು ಸುಪ್ರೀಂಕೋರ್ಟ್ನಲ್ಲಿ ಎಲ್ಲಾ ಮಹಿಳೆಯರನ್ನೊಳಗೊಂಡು ಪೀಠ ರಚಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. 2013ರಲ್ಲಿ ಜ್ಞಾನ್ ಸುಧಾ ಮಿಶ್ರಾ ಮತ್ತು ರಂಜನ್ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಮೊದಲ ಮಹಿಳಾ ನ್ಯಾಯಪೀಠ ಕಾರ್ಯರೂಪಕ್ಕೆ ಬಂದಿತ್ತು. ಆ ಬಳಿಕ ನ್ಯಾಯಮೂರ್ತಿಗಳಾದ ಆರ್. ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಮಹಿಳಾ ನ್ಯಾಯ ಪೀಠ 2018ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದೀಗ ಮೂರನೇ ಬಾರಿಗೆ ಮಹಿಳಾ ಪೀಠ ರಚನೆ ಮಾಡಲಾಗಿದ್ದು, ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಬಿ.ವಿ. ನಾಗರತ್ನ ಮತ್ತು ತ್ರಿವೇದಿ ಇದ್ದಾರೆ. ಇನ್ನು ಈ ಪೀಠದಲ್ಲಿರುವ ನ್ಯಾ. ನಾಗರತ್ನ ಅವರು 2027ಕ್ಕೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.