ನವದೆಹಲಿ, ಡಿ 01 (DaijiworldNews/DB): ಮನುಕುಲದ ಪ್ರಯೋಜನಕ್ಕಾಗಿ ಭಾರತದ ಜಿ20 ಅಧ್ಯಕ್ಷತೆ ಸದ್ಬಳಕೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದಿನಿಂದ ಭಾರತದ ಜಿ20 ಅಧ್ಯಕ್ಷತೆ ಆರಂಭವಾಗುವ ಹಿನ್ನೆಲೆಯಲ್ಲಿ ಗುರುವಾರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಪರಿಕಲ್ಪನೆಯ ಉತ್ತೇಜನಕ್ಕಾಗಿ ಭಾರತದ ಜಿ20 ಅಧ್ಯಕ್ಷತೆ ಸದ್ವಿನಿಯೋಗವಾಗಲಿದೆ. ಮನುಕುಲದ ಪ್ರಯೋಜನ ಇದರ ಉದ್ದೇಶ ಎಂದಿದ್ದಾರೆ.
ಜಗತ್ತು ಎದುರಿಸುತ್ತಿರುವ ಭಾರೀ ಸವಾಲುಗಳನ್ನು ಒಟ್ಟಾಗಿ ಕಾರ್ಯನಿರ್ವಹಿಸುವುದರ ಮೂಲಕ ಪರಿಹರಿಸುವುದು ಸಾಧ್ಯವಿದೆ. ಸಾಮೂಹಿಕ ನಿರ್ಧಾರ, ಮುಕ್ತ ಮತ್ತು ಕಾರ್ಯಸಾಧ್ಯವಾದ ಡಿಜಿಟಲ್ ಸಾರ್ವಜನಿಕ ಸರಕುಗಳ ರಚನೆಗಾಗಿ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ. ವಿಶಾವ ನಾಗರಿಕರ ಕಲ್ಯಾಣಕ್ಕೂ ಇದು ಸುಲಭೋಪಾಯ ಎಂದು ತಿಳಿಸಿದ್ದಾರೆ.
ವಿಶ್ವವೇ ಒಂದು ಕುಟುಂಬ. ಒಂದು ಕುಟುಂಬದೊಳಗೆ ಸಾಮರಸ್ಯ ಸೃಷ್ಟಿಸಲು ನಮ್ಮ ಪ್ರಯತ್ನ ಸಾಗಲಿದೆ. ಆ ಮೂಲಕ ಭವಿಷ್ಯ ನಿರ್ಮಾಣಕ್ಕೆ ಆದ್ಯತೆ ಇರಲಿದೆ. ಅಂತರ್ಗತ, ಮಹತ್ವಾಕಾಂಕ್ಷೆಯ, ಕ್ರಿಯಾ-ಆಧಾರಿತ ಮತ್ತು ನಿರ್ಣಾಯಕ ತಳಹದಿಯಲ್ಲಿ ಭಾರತದ ಜಿ20 ಕಾರ್ಯಸೂಚಿಯು ಇರಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.