ಸಂಭಾಲ್, ಡಿ 01 (DaijiworldNews/DB): ಸ್ನೇಹಿತರ ಸವಾಲು ಗೆಲ್ಲಲು ಅತಿಥಿಗಳೆದುರೇ ಮಂಟಪದಲ್ಲಿ ವರ ಮುತ್ತು ನೀಡಿದ್ದಕ್ಕಾಗಿ ಕೋಪಗೊಂಡ ವಧು ಮದುವೆಯನ್ನೇ ನಿಲ್ಲಿಸಿದ ಘಟನೆ ಉತ್ತರಪ್ರದೇಶದ ಸಂಭಾಲ್ನಲ್ಲಿ ನಡೆದಿದೆ. ಇದರಿಂದ ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡುವ ಖುಷಿಯಲ್ಲಿದ್ದ ವರನ ಕನಸು ನುಚ್ಚು ನೂರಾಗಿದೆ.
ಉತ್ತರಪ್ರದೇಶದ ಸಂಭಾಲ್ನಲ್ಲಿ ಮಂಗಳವಾರ ರಾತ್ರಿ ಮದುವೆ ಮಂಟಪದಲ್ಲಿ ವಧು ಮತ್ತು ವರ ಪರಸ್ಪರ ಹಾರ ಬದಲಾಯಿಸಿಕೊಂಡ ಬಳಿಕ ವರ ತನ್ನ ಕೈ ಹಿಡಿಯುವವಳಿಗೆ ಮುತ್ತು ನೀಡಿದ್ದಾನೆ. ಮದುವೆಗೆ ಬಂದ ಸುಮಾರು 300 ಮಂದಿ ಅತಿಥಿಗಳ ಮುಂಭಾಗದಲ್ಲಿ ವರ ತನಗೆ ಮುತ್ತು ನೀಡಿದ್ದನ್ನು ವಧು ಸಹಿಸದಾಗಿದ್ದಾಳೆ. ಕೂಡಲೇ ಮಂಟಪದಿಂದ ಹೊರ ನಡೆದು ಪೊಲೀಸರಿಗೆ ಕರೆ ಮಾಡಿದ್ದಾಳೆ. 23 ವರ್ಷದ ಪದವೀಧರೆ ವಧುವು ಇದೇ ವೇಳೆ ವರನ ಗುಣನಡತೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾಳೆ.
ಇನ್ನು ಪೊಲೀಸರು ಬಂದು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಮನವೊಲಿಸಲು ಯತ್ನಿಸಿದ್ದರಾದರೂ, ವಧು ಮದುವೆಗೆ ಸುತಾರಾಂ ಒಪ್ಪಲಿಲ್ಲ. ವರ ತನ್ನ ಸ್ನೇಹಿತರ ಸವಾಲು ಗೆಲ್ಲಲು ನನಗೆ ಮುತ್ತಿಕ್ಕಿದ್ದಾನೆ. ಆತನ ಅಷ್ಟೂ ಜನರೆದುರು ನನ್ನೊಂದಿಗೆ ಅನುಚಿತ ವರ್ತನೆ ತೋರಿದ್ದಾನೆ, ಇದರಿಂದ ನಾನು ಅವಮಾನ ಅನುಭವಿಸಿದೆ ಎಂದು ವಧು ಆರೋಪಿಸಿದ್ದಾಳೆ.
ಇನ್ನು ವಧುವಿನ ತಾಯಿ ಮಾತನಾಡಿ, ವರ ಸ್ನೇಹಿತರ ಪ್ರಚೋದನೆಯಿಂದ ಆ ರೀತಿ ಮಾಡಿದ್ದು, ಮಗಳ ಮನವೊಲಿಕೆಗೆ ಪ್ರಯತ್ನಿಸಿದ್ದೇನೆ. ಆದರೆ ಆಕೆ ಮದುವೆಗೆ ಒಪ್ಪುತ್ತಿಲ್ಲ. ಈಗಾಗಲೇ ಘಟನೆ ಸಂಭವಿಸುವುದಕ್ಕೂ ಮುನ್ನ ಮದುವೆಯ ವಿಧಿವಿಧಾನಗಳು ನಡೆದಿದ್ದು, ಅವರ ವಿವಾಹ ನೆರವೇರಿದಂತಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಮಾತುಕತೆ ಮೂಲಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.