ಭದ್ರಾವತಿ , ಡಿ 01 (DaijiworldNews/MS): ಭದ್ರಾವತಿ ತಾಲೂಕು ದೊಣಬಘಟ್ಟ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ದಾಳಿಗೆ ನಾಲ್ಕೂವರೆ ವರ್ಷದ ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ಬಾಲಕನನ್ನು ಸೈಯದ್ ಮದನಿ ಎಂದು ಗುರುತಿಸಲಾಗಿದೆ. ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು 7-8 ಬೀದಿ ನಾಯಿಗಳ ಹಿಂಡು ಮಗು ಮೇಲೆ ದಾಳಿ ಮಾಡಿ ತಲೆಯನ್ನು ಸೀಳಿ ಎಳೆದಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ
ಇದರಿಂದಾಗಿ ಮಗು ತೀವ್ರ ಅಸ್ವಸ್ಥತೆಯಿಂದ ಬಳತ್ತಿರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಘಟನೆ ವೇಳೆ ಮಗುವಿನ ತಂದೆ ಸ್ವಲ್ಪ ದೂರಲ್ಲೇ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಯಂತ್ರದ ಶಬ್ದಕ್ಕೆ ಬೀದಿ ನಾಯಿಗಳ ದಾಳಿ ಆಗಿರುವುದು ಗಮನಕ್ಕೆ ಬರಲಿಲ್ಲ. ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಪಂಚಾಯಿತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.