ಅಸ್ಸಾಂ, ನ 30 (DaijiworldNews/DB): ತನ್ನ ಪೋಷಕರಿಗೆ ದೂರು ಹೇಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೊಬ್ಬ ಇತರ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಐದು ತಿಂಗಳ ಗರ್ಭಿಣಿ ಶಿಕ್ಷಕಿಯನ್ನು ಎಳೆದಾಡಿದ ಘಟನೆ ಅಸ್ಸಾಂನ ದಿಬ್ರುಗಢ ಜಿಲ್ಲೆಯ ಜವಾಹರ ನವೋದಯ ಶಾಲೆಯಲ್ಲಿ ನಡೆದಿದೆ. ಜೊತೆಗೆ ಶಾಲೆಯ ಹಂಗಾಮಿ ಪ್ರಾಂಶುಪಾಲರನ್ನೂ ಎಳೆದಾಡಿದ್ದಾರೆ.
ಭಾನುವಾರ ಶಾಲೆಯಲ್ಲಿ ಪೋಷಕರು-ಶಿಕ್ಷಕರ ಸಭೆ ಕರೆಯಲಾಗಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಸರಿಯಾಗಿ ಓದದಿರುವ ಬಗ್ಗೆ ಶಿಕ್ಷಕಿ ಆತನ ಪೋಷಕರಿಗೆ ದೂರು ಹೇಳಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಸಭೆ ಮುಗಿದ ಬಳಿಕ ಇತರ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಬಂದು ಶಿಕ್ಷಕಿಯನ್ನು ನಂದಿಸಿ ಎಳೆದಾಡಿದ್ದಾರೆ. ಓರ್ವ ವಿದ್ಯಾರ್ಥಿ ಶಿಕ್ಷಕಿಯ ಜಡೆ ಹಿಡಿದೆಳೆದಿದ್ದಾನೆ. ಶಿಕ್ಷಕಿ ಐದು ತಿಂಗಳ ಗರ್ಭಿಣಿಯಾಗಿದ್ದು, ಕೂಡಲೇ ಶಾಎಯ ಸಿಬಂದಿ ಹಾಗೂ ವಿದ್ಯಾರ್ಥಿನಿಯರು ಓಡಿ ಬಂದು ಆತನಿಂದ ಶಿಕ್ಷಕಿಯನ್ನು ಬಿಡಿಸಿದ್ದಾರೆ. ಈ ವೇಳೆ ಹಂಗಾಮಿ ಪ್ರಾಂಶುಪಾಲ ರತನ್ಕುಮಾರ್ ಅವರನ್ನೂ ವಿದ್ಯಾರ್ಥಿಗಳು ಎಳೆದಾಡಿದ್ದಾರೆ.
10 ಮತ್ತು 11ನೇ ತರಗತಿಯ 22 ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಪೋಷಕರ ಸಭೆ ಕರೆದು ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರಿಗೆ ದೂರು ನೀಡಲಾಗಿದ್ದರೂ ಎಫ್ಐಆರ್ ದಾಖಲಿಸದೆ ಸಾಮಾನ್ಯ ದೂರು ಸ್ವೀಕರಿಸಲಾಗಿದೆ ಎಂದು ಹಂಗಾಮಿ ಪ್ರಾಂಶುಪಾಲ ರತನ್ಕುಮಾರ್ ತಿಳಿಸಿದ್ದಾರೆ.