ಅಹಮದಾಬಾದ್, ನ 30 (DaijiworldNews/DB): ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಖಾತೆಯನ್ನೇ ತೆರೆಯದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಪಕ್ಷಗಳಿಗೂ ಸಮಾನ ಹಕ್ಕಿದೆ. ಆದರೆ ಯಾವ ಪಕ್ಷವನ್ನು ಜನರು ಸ್ವೀಕರಿಸುತ್ತಾರೆ ಎಂಬುದು ಮುಖ್ಯ. ಆಮ್ ಆದ್ಮಿ ಪಕ್ಷಕ್ಕೆ ಗುಜರಾತಿಗರ ಮನಸ್ಸಿನಲ್ಲಿ ಜಾಗವಿಲ್ಲ. ಹೀಗಾಗಿ ಆ ಪಕ್ಷ ರಾಜ್ಯದಲ್ಲಿ ಖಾತೆಯನ್ನೇ ತೆರೆಯುವುದಿಲ್ಲ. ಫಲಿತಾಂಶದವರೆಗೂ ಕಾದು ನೋಡಿ ಎಂದರು.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಲಿದೆ ಎಂಬ ವಿಶ್ವಾಸವಿದೆ. ಪ್ರಧಾನಿ ಮೋದಿ ಮತ್ತು ಪಕ್ಷದ ಮೇಲೆ ಜನ ನಂಬಿಕೆಯಿಟ್ಟಿದ್ದಾರೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಪ್ರಧಾನಿಯಾಗಿರುವ ಈ ಸಂದರ್ಭದಲ್ಲಿ ಮಾಡಿದ ಜನಪರ ಕಾರ್ಯಗಳೇ ಜನಾಭಿಪ್ರಾಯ ಬಿಜೆಪಿ ಕಡೆಗೆ ಇರುವುದಕ್ಕೆ ಮುಖ್ಯ ಕಾರಣ ಎಂದವರು ತಿಳಿಸಿದರು.
ಸಮಾಜ ವಿರೋಧಿ ನಿಗ್ರಹ ದಳವನ್ನು ರಾಜ್ಯದಲ್ಲಿ ಸ್ಥಾಪಿಸುವ ಘೋಷಣೆಯನ್ನು ಬಿಜೆಪಿ ರಾಜ್ಯದ ಜನತೆಗೆ ನೀಡಿದ್ದು, ಇದು ಉತ್ತಮವಾದ ಯೋಜನೆ. ಇತರ ರಾಜ್ಯಗಳೂ ಇದನ್ನು ಪರಿಗಣಿಸಿದರೆ ಒಳ್ಳೆಯದು ಎಂದವರು ಮನವಿ ಮಾಡಿದರು.