ಉತ್ತರ ಪ್ರದೇಶ, ನ 30 (DaijiworldNews/DB): ಭಯೋತ್ಪಾದನೆಯ ಹೊಸ ರೂಪವಾಗಿ ಲವ್ ಜಿಹಾದ್ ಕಾಣಿಸಿಕೊಳ್ಳುತ್ತಿದೆ. ಆ ಮೂಲಕ ಸನಾತನ ಧರ್ಮವನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.
ಮಾಜಿ ಶಾಸಕ ಕೃಷ್ಣಾನಂದ ರೈ ಅವರ ಪುಣ್ಯಸ್ಮರಣೆ ನಿಮಿತ್ತ ಇಲ್ಲಿನ ಮೊಹಮ್ಮದಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಲವ್ ಜಿಹಾದ್ ಭಯೋತ್ಪಾದನೆಯ ಹೊಸ ರೂಪ. ಅದರ ಮೂಲಕ ಸನಾತನ ಧರ್ಮವನ್ನು ಭಾರತದಿಂದ ನಿರ್ನಾಮ ಮಾಡುವುದು ಅವರ ಉದ್ದೇಶ. ಈ ಷಡ್ಯಂತ್ರ ವಿಫಲಗೊಳಿಸಲು ಎಲ್ಲರೂ ಒಂದಾಗಬೇಕು ಎಂದವರು ತಿಳಿಸಿದರು.
ಜನಸಂಖ್ಯೆ ನಿಯಂತ್ರಣ ಕಾನೂನನ್ನು ದೇಶದಲ್ಲಿ ಜಾರಿಗೊಳಿಸುವುದರಿಂದ ದೇಶದ ಸಮಗ್ರ ಅಭಿವೃದ್ದಿ ಸಾಧ್ಯ. ಚೀನಾದಲ್ಲಿ ಪ್ರತಿ ನಿಮಿಷಕ್ಕೆ 10 ಮಕ್ಕಳು ಜನಿಸಿದರೆ, ಭಾರತದಲ್ಲಿ ಪ್ರತಿ ನಿಮಿಷಕ್ಕೆ ಜನಿಸುವ ಶಿಶುಗಳ ಸಂಖ್ಯೆ 31. ಚೀನಾದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ರೂಪಿಸಿರುವುದರಿಂದ ಅಲ್ಲಿ ಅಭಿವೃದ್ದಿ ತ್ವರಿತವಾಗಿದೆ ಎಂದವರು ಇದೇ ವೇಳೆ ಪ್ರತಿಪಾದಿಸಿದರು.