ಬೆಂಗಳೂರು, ನ 30 (DaijiworldNews/MS): ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ, ನಾವು ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ, ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್ ಸುನೀಲ್ ರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ರೌಡಿ ಶೀಟರ್ ಆಗಿದ್ದಂತ ಸೈಲೆಂಟ್ ಸುನೀಲ್ ಬಿಜೆಪಿ ನಾಯಕರನ್ನು ರಕ್ತದಾನ ಶಿಬಿರಕ್ಕೆ ಆಹ್ವಾನಿಸಿ, ಕಾರ್ಯಕ್ರಮ ಮಾಡಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪಿಸಿತ್ತು. ಅಲ್ಲದೇ ರೌಡಿಗಳ ತಾಣವಾಗುತ್ತಿದೆ ಬಿಜೆಪಿ ಎಂಬುದಾಗಿ ವಾಗ್ಧಾಳಿ ನಡೆಸಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ನಳೀನ್ ಕುಮಾರ್ ಕಟೀಲ್ ಅವರು ಸೈಲೆಂಟ್ ಸುನಿಲ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಬಳಿಕ ಈಗ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.