ಗಾಂಧಿನಗರ, ನ 29 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರಿಗೆ ರಾವಣನಂತೆ 10 ತಲೆಗಳಿವೆಯೇ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಖರ್ಗೆ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಗುಜರಾತ್ನ ಪುತ್ರನನ್ನು ಖರ್ಗೆ ಅವಮಾನಿಸುತ್ತಿದ್ದಾರೆ ಎಂದು ಕಿಡಿ ಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ಗುಜರಾತ್ ಚುನಾವಣೆಯ ಬಿಸಿ ಕಾಂಗ್ರೆಸ್ಗೆ ತಟ್ಟಿದೆ. ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಮೌತ್ ಕಾ ಸೌದಾಗರ್ನಿಂದ ರಾವಣನವರೆಗೆ ಕಾಂಗ್ರೆಸ್ ಗುಜರಾತ್ ಮತ್ತು ಗುಜರಾತ್ನ ಪುತ್ರನನ್ನು ಅವಮಾನ ಮಾಡುತ್ತಲೇ ಇದೆ ಎಂದು ಕಿಡಿ ಕಾರಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಖರ್ಗೆ, ದೇಶದ ಪ್ರಧಾನಿ ತಮ್ಮ ಕೆಲಸ ಮರೆತು ಪಾಲಿಕೆ, ಎಂಎಲ್ಎ, ಎಂಪಿ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿಯೂ ಪ್ರಚಾರ ನಡೆಸುತ್ತಿದ್ದಾರೆ. ಮೋದಿಯನ್ನು ನೋಡಿ ಮತ ನೀಡಿ ಎನ್ನುವ ಅವರ ಮುಖವನ್ನು ನಾವು ಎಷ್ಟು ಬಾರಿ ನೋಡುವುದು? ಅವರಿಗೆ ಎಷ್ಟು ರೂಪಗಳಿವೆ? ರಾವಣನಂತೆ ಹತ್ತು ತಲೆಗಳಿವೆಯೇ ಎಂದು ಪ್ರಶ್ನಿಸಿದ್ದರು.