ಹೈದರಾಬಾದ್, ನ 29 (DaijiworldNews/DB): ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ಕ್ರೇನ್ ಮೂಲಕ ಬಲವಂತವಾಗಿ ಎಳೆದೊಯ್ದ ಘಟನೆ ಇಂದು ನಡೆದಿದೆ.
ತೆಲಂಗಾಣದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಶರ್ಮಿಳಾ ಅವರ ವೈಎಸ್ಆರ್ ತೆಲಂಗಾಣ ಪಕ್ಷವು ಕೆ. ಚಂದ್ರಶೇಖರ್ ರಾವ್ ಅವರ ತೆಲಂಗಾಣ ಸರ್ಕಾರದ ವಿರುದ್ದ ಪಾದಯಾತ್ರೆ ನಡೆಸುತ್ತಿದೆ. ಇನ್ನು ನಿನ್ನೆ ವಾರಂಗಲ್ನಲ್ಲಿ ಎರಡೂ ಪಕ್ಷಗಳ ಬೆಂಬಲಿಗರ ಮಧ್ಯೆ ಘರ್ಷಣೆ ಉಂಟಾದ ಹಿನ್ನೆಲೆಯಲ್ಲಿ ಶರ್ಮಿಳಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದ್ದರು.
ಇಂದು ಬೆಳಗ್ಗೆ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಪ್ರತಿಭಟನಾ ರ್ಯಾಲಿಯನ್ನು ಶರ್ಮಿಳಾ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೋಮವಾರದ ಘರ್ಷಣೆಯಲ್ಲಿ ಹಾನಿಗೊಂಡಿದ್ದ ತಮ್ಮ ಕಾರಿನಲ್ಲೇ ಶರ್ಮಿಳಾ ಇಂದೂ ಪ್ರಯಾಣಿಸಲು ಮುಂದಾಗಿ ಕಾರನ್ನೇರಿದರು. ಆ ವೇಳೆ ಶರ್ಮಿಳಾ ಕಾರಿನೊಳಗಿದ್ದಾಗಲೇ ಪೊಲೀಸರು ಬಲವಂತವಾಗಿ ಅವರ ಕಾರನ್ನು ಕ್ರೇನ್ ಮೂಲಕ ಎಳೆದೊಯ್ದಿದ್ದಾರೆ.