ಕಲ್ಕತ್ತಾ, ನ 29 (DaijiworldNews/DB): ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸ್ವೆಟರ್ ವಿತರಣೆಗೆ ಬೇಕಾದ ಸ್ವೆಟರ್ಗಳನ್ನು ತರಲಿಲ್ಲವೆಂದು ಗರಂ ಆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕುರ್ಚಿಯಲ್ಲಿ ಕುಳಿತುಕೊಂಡ ಘಟನೆ ನಡೆದಿದೆ. ಸ್ವೆಟರ್ ತರುವವರೆಗೂ ಇಲ್ಲೇ ಕುಳಿತುಕೊಳ್ಳುವುದಾಗಿ ಕೂಗಾಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸ್ವೆಟರ್ ವಿತರಣೆ ಮಾಡಬೇಖಿತ್ತು. ಆದರೆ ಸರಿಯಾದ ಸಮಯಕ್ಕೆ ಸ್ವೆಟರ್ಗಳನ್ನು ಸ್ಥಳಕ್ಕೆ ಅಧಿಕಾರಿಗಳು ತಲುಪಿಸಿರಲಿಲ್ಲ. ಇದರಿಂದ ಕೋಪಗೊಂಡ ಸಿಎಂ ಬ್ಯಾನರ್ಜಿ, ಸ್ವೆಟರ್ ಬರುವವರೆಗೂ ನಾನಿಲ್ಲಿಯೇ ಕಾಯುತ್ತೇನು. ಬಿಡಿಒಗಳು ಎಲ್ಲಿ ಕಚೇರಿಯಲ್ಲೇ ಮಲಗಿದ್ದಾರಾ ಎಂದು ಪ್ರಶ್ನಿಸಿದರು.
15 ಸಾವಿರ ಸ್ವೆಟರ್ಗಳನ್ನು ವಿತರಣೆ ಮಾಡಬೇಕಿತ್ತಾದರೂ, ಒಂದೂ ಇಲ್ಲಿ ಬಂದಿಲ್ಲ ಎಂದು ಕಿಡಿ ಕಾರಿದರು. ಬಳಿಕ ಬಿಡಿಒನನ್ನು ವೇದಿಕೆಗೆ ಕರೆದು, ಸರಿಯಾದ ಕೆಲಸ ಮಾಡಲು ಸರ್ಕಾರಿ ಅಧಿಕಾರಿಗಳು ಮುಂದಾಗದ ಕಾರಣ ಅಂತಹವರ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಮುಂದೆ ನನ್ನನ್ನು ದೂಷಿಸಬೇಡಿ ಎಂದರು.