ನವದೆಹಲಿ, ನ 29 (DaijiworldNews/DB): ದಿ ಕಾಶ್ಮೀರ್ ಫೈಲ್ಸ್ ಚಿತ್ರ ತೆರೆಕಂಡ ಬಳಿಕ ಕಾಶ್ಮೀರದಲ್ಲಿ ನಡೆಯುವ ಹತ್ಯೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಅಶ್ಲೀಲತೆಯಿಂದ ಕೂಡಿದೆ ಎಂಬ 53ನೇ ಭಾರತೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ನಡವ್ ಲ್ಯಾಪಿಡ್ ಹೇಳಿಕೆ ಸರಿಯಾಗಿಯೇ ಇದೆ. ಆ ಚಿತ್ರ ತೆರೆ ಕಂಡ ಮೇಲೆ ಕಾಶ್ಮೀರದಲ್ಲಿ ಹೆಚ್ಚಿನ ಹತ್ಯೆಗಳು ನಡೆಯುತ್ತಿವೆ. ಕಾಶ್ಮೀರ ಪಂಡಿತರು, ಭದ್ರತಾ ಸಿಬಂದಿಯನ್ನು ಹತ್ಯೆಗೈದ ಅನೇಕ ನಿದರ್ಶನಗಳಿವೆ ಎಂದರು.
ಕಾಶ್ಮೀರಿ ಪಂಡಿತರ ಮಕ್ಕಳೂ ಹೋರಾಟ ಮಾಡುವಾಗ ಈ ಕಾಶ್ಮೀರಿ ಫೈಲ್ ಜನರು ಎಲ್ಲಿದ್ದರು? ಅಲ್ಲಿ ಹತ್ಯೆ ನಡೆದಾಗ ಇವರೆಲ್ಲ ಎಲ್ಲಿ ಹೋಗಿದ್ದರು. ಕಾಶ್ಮೀರ ಫೈಲ್ಸ್ 2.0 ಯೋಜನೆಯೇನಾದರೂ ಇದ್ದರೆ ಅದನ್ನೂ ಮಾಡಿ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.