ಮುಂಬೈ, ನ 29 (DaijiworldNews/DB): ರಾಹುಲ್ ಗಾಂಧಿಯವರನ್ನು ಹೀಯಾಳಿಸಲು ಕೆಲವರು ಅವರನ್ನು ಪಪ್ಪು ಎಂಬುದಾಗಿ ಹೇಳುತ್ತಿದ್ದರು. ಆದರೆ ಅವರಿಗಿದ್ದ ಆ ಪಪ್ಪು ಇಮೇಜ್ ಸುಳ್ಳು ಎಂಬುದು ಭಾರತ್ ಜೋಡೊ ಯಾತ್ರೆ ಮೂಲಕ ಜನರಿಗೆ ಗೊತ್ತಾಗಿದೆ ಎಂದು ಲೇಖಕಿ-ಚಿತ್ರ ನಿರ್ದೇಶಕಿ ಸಂಧ್ಯಾ ಗೋಖಲೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಂಧ್ಯಾ ಗೋಖಲೆ ಮತ್ತು ಅವರ ಪತಿ ನಟ ಅಮೋಲ್ ಪಾಲೇಕರ್ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ, ಅದನ್ನು ರಕ್ಷಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿಯವರು ಕೆಲಸ ಮಾಡುತ್ತಿದ್ದಾರೆ. ಸಕಾರಾತ್ಮಕ ಉತ್ಸಾಹದಿಂದ ಅವರು ಮಾಡುತ್ತಿರುವ ಯಾತ್ರೆ ಶ್ಲಾಘನೀಯ ಎಂದರು.
ಪ್ರಜಾತಂತ್ರದ ಮೇಲೆ ಹಲವು ರೀತಿಯಲ್ಲಿ ಪ್ರಸ್ತುತ ದಬ್ಬಾಳಿಕೆ ನಡೆಯುತ್ತಿದೆ. ವಿಭಿನ್ನ ಅಭಿಪ್ರಾಯ ಹೊಂದಿದರೆ ಅದನ್ನು ದೇಶದ್ರೋಹವೆಂದು ಪರಿಗಣಿಸುವಷ್ಟು ಕೆಳಮಟ್ಟಕ್ಕೆ ಈಗಿನ ವ್ಯವಸ್ಥೆ ಇಳಿದಿದೆ. ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಯ ನಿಲುವುಗಳೇ ಹೆಚ್ಚಾಗುತ್ತಿವೆ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ವಿರುದ್ದ ಕೆಲವರು ಮಾತ್ರ ಮಾತನಾಡುತ್ತಿದ್ದಾರೆ. ಈ ಬಗ್ಗೆ ಧ್ವನಿ ಎತ್ತಬೇಕೆಂಬ ಹಲವರ ಧ್ವನಿ ತನಿಖಾ ಸಂಸ್ಥೆಗಳು ಮತ್ತು ಪೊಲೀಸರ ಸಂಭಾವ್ಯ ದಾಳಿಗೆ ಭಯಗೊಂಡು ಉಡುಗಿ ಹೋಗಿದೆ ಎಂದರು.