ಹೈದರಾಬಾದ್, ನ 29 (DaijiworldNews/DB): ವಧು-ವರರಿಗೆ ಪರಸ್ಪರ ಒಪ್ಪಿಗೆಯಿಲ್ಲದೇ ಮದುವೆ ಮಂಟಪದಲ್ಲೇ ಮದುವೆ ಮುರಿದು ಬೀಳುವುದು ಸಾಮಾನ್ಯ. ಆದರೆ ಇಲ್ಲಿ ವರನ ಸ್ನೇಹಿತರಿಗೆ ಕೋಳಿ ಮಾಂಸ ನೀಡದಕ್ಕೆ ಮದುವೆಯೇ ಮುರಿದು ಬಿದ್ದಿದೆ!
ಹೈದರಾಬಾದ್ನ ಶಹಪುರ ನಗರದಲ್ಲಿ ಈ ಘಟನೆ ನಡೆದಿದೆ. ಜಗದ್ಗಿರಿಗುಟ್ಟದ ರಿಂಗ್ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧುವಿಗೆ ನವೆಂಬರ್ 28ರಂದು ಮಧ್ಯಾಹ್ನ 3 ಗಂಟೆಗೆ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ ಇದಕ್ಕೂ ಮೊದಲು ಭಾನುವಾರ ರಾತ್ರಿ ವಧೂ-ವರರ ಕಡೆಯವರಿಗೆ ಊಟದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ವಧು-ವರರಿಬ್ಬರೂ ಬಿಹಾರದ ಮಾರ್ವಾಡಿ ಕುಟುಂಬದವರಾದ ಕಾರಣ ಸಸ್ಯಾಹಾರಿ ಔತಣಕೂಟ ನಡದಿತ್ತು. ಆದರೆ ಔತಣಕೂಟಕ್ಕೆ ಬಂದ ವರನ ಸ್ನೇಹಿತರು ಕೋಳಿ ಮಾಂಸದೂಟ ನೀಡದಕ್ಕೆ ವಧುವಿನ ಕಡೆಯವರೊಂದಿಗೆ ತಕರಾರು ತೆಗೆದಿದ್ದಾರೆ. ಇನ್ನು ಅವರೊಂದಿಗೆ ವರನ ಕಡೆಯ ಇತರರೂ ಸೇರಿಕೊಂಡು ತಮಗೆ ಬೇಕಾದಂತೆ ಔತಣಕೂಟದಲ್ಲಿ ಖಾದ್ಯಗಳನ್ನು ಬಡಿಸಿಲ್ಲವೆಂದು ವಧುವಿನ ಕಡೆಯವರನ್ನು ಹೀಯಾಳಿಸಿದ್ದಾರೆ. ಇದರಿಂದ ಪರಸ್ಪರ ಮಾತಿನ ಚಕಮಕಿ ನಡೆದು, ಹೊಡೆದಾಟದ ಹಂತದವರೆಗೂ ಸಾಗಿದೆ. ಬಳಿಕ ಮದುವೆಯನ್ನೇ ರದ್ದುಗೊಳಿಸಲಾಗಿದೆ.
ಬಳಿಕ ವಧುವಿನ ಕಡೆಯವರು ಜೇಡಿಮೆಟ್ಲ ಸಿಐ ಪವನ್ ಅವರಿಗೆ ವಿಷಯ ತಿಳಿಸಿದ್ದು, ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಲಾಯಿತು. ಬಳಿಕ ರಾಜಿಸಂಧಾನದ ಮೂಲಕ ಗಲಾಟೆ ಅಂತ್ಯಗೊಂಡಿದ್ದು, ಅಂದು ರದ್ದಾದ ಮದುವೆಯನ್ನು ನವೆಂಬರ್ 30ರಂದು ನೆರವೇರಿಸಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.