ಬೆಂಗಳೂರು, ನ 28 (DaijiworldNews/MS): ಕೋಲ್ಕತ್ತಾ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಟಿಶ್ಶೂ ಪೇಪರ್ ಬಾಂಬ್ ಬೆದರಿಕೆ ಮಾಹಿತಿ ಬಂದು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.
ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿದಾಗ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ. ಕೋಲ್ಕತ್ತಾದ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 5.29ಕ್ಕೆ ಹೊರಟಿದ್ದ 6E379 ವಿಮಾನ 8.01ಕ್ಕೆ ಬೆಂಗಳೂರು ತಲುಪುತ್ತಿದ್ದಂತೆಯೇ ವಿಮಾನ ಒಳಗೆ ಬಾಂಬ್ ಇದೆ ಎಂಬ ಬೆದರಿಕೆ ಮಾಹಿತಿ ಬಂತು.
ತಕ್ಷಣವೇ ಎಲ್ಲಾ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ, ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು. ತಪಾಸಣೆ ನಡೆಸಿದಾಗ ಅನಾಮಧೇಯ ವ್ಯಕ್ತಿಯೋರ್ವ 6ಡಿ ಸೀಟ್ ನಲ್ಲಿ ಬಾಂಬ್ ಎಂದು ನೀಲಿ ಶಾಯಿಯಲ್ಲಿ ಬರೆದಿದ್ದು ಪತ್ತೆಯಾಗಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಪೈಕಿಯೇ ಅನುಮಾನ ವ್ಯಕ್ತವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.