ಮೈಸೂರು, ನ 27 (DaijiworldNews/DB): ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೈಸೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಬೆನ್ನಲ್ಲೇ ಮೈಸೂರಿನ ವಸತಿ ಬಾಡಿಗೆದಾರರಿಗೆ ಅಲ್ಲಿನ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ತಮ್ಮ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರ ಬಗ್ಗೆ ಮಾಹಿತಿ ನೀಡಲು ಮನೆ ಮಾಲಕರಿಗೆ ಸೂಚಿಸಲಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್ ಮೈಸೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಸ್ಪೋಟಕಗಳನ್ನು ತಯಾರು ಮಾಡಿದ್ದ ಎಂಬ ಮಾಹಿತಿ ಬೆನ್ನಲ್ಲೇ ಮೈಸೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಇನ್ನು ಮುಂದೆ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆಯುವ ಮುನ್ನ ಮತ್ತು ಈಗ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರ ಮಾಹಿತಿಯನ್ನು ಮನೆ ಮಾಲಕರು ತಮ್ಮ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪೇಯಿಂಗ್ ಗೆಸ್ಟ್ಗಳಿಗೂ ಇದು ಅನ್ವಯವಾಗಲಿದೆ ಎನ್ನಲಾಗಿದೆ.
ಮುಂದಿನ ಒಂದು ತಿಂಗಳೊಳಗೆ ಮಾಹಿತಿ ನೀಡಲು ಆದೇಶಿಸಲಾಗಿದ್ದು, ಪೊಲೀಸ್ ಠಾಣೆಗಳಲ್ಲಿ ಸಿಗುವ ಅರ್ಜಿಯನ್ನು ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಅದಕ್ಕೆ ಮಾಲಕರು ಹೊಣೆಯಾಗುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
ಸೂಕ್ತ ದಾಖಲಾತಿಗಳಿಲ್ಲದೆ ಹೊಟೇಲ್, ಹೋಂ ಸ್ಟೇಗಳಿಗೂ ಪ್ರವೇಶ ನೀಡುವಂತಿಲ್ಲ. ನಗರ ಪ್ರವೇಶಿಸುವ 9 ಪಾಯಿಂಟ್ಗಳಲ್ಲಿ ಇನ್ ಅಂಡ್ ಔಟ್ ಆಗುವವರ ಬಗ್ಗೆಯೂ ಸಿಬಂದಿ ಪರಿಶೀಲನೆ ನಡೆಸಲಿದ್ದಾರೆ. ಇನ್ನು ನಗರದೊಳಗೆ 23 ಪಾಯಿಂಟ್ಗಳನ್ನು ಗುರ್ತಿಸಲಾಗಿದ್ದು, ಶಂಕಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪರಿಶೀಲನೆ ನಡೆಯಲಿದೆ ಎಂದಿದ್ದಾರೆ. ಇನ್ನು ಪೊಲೀಸರ ಈ ಆದೇಶಕ್ಕೆ ಸಾರ್ವಜನಿಕ ವರ್ಗದಿಂದ ಆಕ್ರೋಶ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.