ಶ್ರೀನಗರ, ನ 27 (DaijiworldNews/DB): ಮುಂದಿನ 24 ಗಂಟೆಗಳೊಳಗೆ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಬೇಕೆಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಏಳು ಮಂದಿ ಮಾಜಿ ಶಾಸಕರಿಗೆ ಅನಂತ್ನಾಗ್ ಜಿಲ್ಲಾಧಿಕಾರಿ ಭಾನುವಾರ ನೋಟಿಸ್ ನೀಡಿದ್ದಾರೆ.
ಮೆಹಬೂಬಾ ಮುಫ್ತಿ, ಮಾಜಿ ಶಾಸಕರಾದ ಮೊಹಮ್ಮದ್ ಅಲ್ತಾಫ್ ವಾನಿ, ಅಬ್ದುಲ್ ರಹೀಂ ರಾಥರ್, ಅಬ್ದುಲ್ ಮಜೀದ್ ಭಟ್, ಅಲ್ತಾಫ್ ಶಾ, ಅಬ್ದುಲ್ ಕಬೀರ್ ಪಠಾಣ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಶೀರ್ ಶಾ ಮತ್ತು ಚೌಧರಿ ನಿಜಾಮುದ್ದೀನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಖಾನಬಾಲ್ನ ಹೌಸಿಂಗ್ ಕಾಲೊನಿಯಲ್ಲಿರುವ ಬಂಗಲೆಯಲ್ಲಿ ಸದ್ಯ ಅವರೆಲ್ಲರೂ ವಾಸವಾಗಿದ್ದು, ಕೂಡಲೇ ಈ ಬಂಗಡೆ ಖಾಲಿ ಮಾಡಿ ಬೇರೆಡೆಗೆ ವಾಸಸ್ಥಾನ ಬದಲಾಯಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ಸ್ಪಂದಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಕಳೆದ ತಿಂಗಳು ಗುಪ್ಕರ್ ಪ್ರದೇಶದಲ್ಲಿರುವ ಫೇರ್ವ್ಯೂ ಬಂಗಲೆಯಿಂದ ಖಾಲಿ ಮಾಡುವಂತೆ ಮೆಹಬೂಬಾ ಮುಫ್ತಿ ಅವರಿಗೆ ನೋಟಿಸ್ ನೀಡಲಾಗಿತ್ತು.