ಇಂದೋರ್ (ಮಧ್ಯಪ್ರದೇಶ), ನ 27 (DaijiworldNews/DB): ರಾಹುಲ್ ಗಾಂಧಿ ಸಹಾನುಭೂತಿ ಹೊಂದಿರುವ ನಾಯಕ. ಅವರ ನಿಜವಾದ ಮುಖವನ್ನು ಜನರು ಈಗ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಭಾನುವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ವಿದ್ಯಾವಂತರು. ಸಹಾನುಭೂತಿಯುಳ್ಳವರು. ಅವರು ತೆಗೆದುಕೊಳ್ಳುವ ಯಾವುದೇ ನಿಲುವುಗಳು ಸ್ಪಷ್ಟವಾಗಿರುತ್ತವೆ ಎಂದರು.
ರಾಹುಲ್ ವರ್ಚಸ್ಸು ಹಾಳು ಮಾಡುವ ಕೆಲಸದಲ್ಲಿ ಬಿಜೆಪಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದೆ. ಆದರೆ ಇದೀಗ ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆ ಮೂಲಕ ಅವರ ನಿಜವಾದ ಮುಖ, ವ್ಯಕ್ತಿತ್ವವನ್ನು ಜನರು ನೋಡುತ್ತಿದ್ದಾರೆ ಎಂದವರು ತಿಳಿಸಿದರು.
ರಾಜಸ್ಥಾನ ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಸೌಹಾರ್ದಯುತವಾಗಿ ಬಗೆ ಹರಿಯಲಿದೆ. ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಭಾರತ್ ಜೋಡೋ ಯಾತ್ರೆಗೆ ಇಲ್ಲಿ ಸಹಿತ ಎಲ್ಲಾ ಕಡೆಯೂ ದೊಡ್ಡ ಯಶಸ್ಸು ಲಭಿಸಿದೆ ಎಂದರು.