ನವದೆಹಲಿ, ನ 27 (DaijiworldNews/DB): ಭಾರತ ವೇಗವಾಗಿ ಅಭಿವೃದ್ದಿ ಹೊಂದಲು ಜನಸಂಖ್ಯೆ ನಿಯಂತ್ರಣ ಕಾನೂನು ರೂಪಿಸಬೇಕು ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಸಂಪನ್ಮೂಲ ಸೀಮಿತ ಪ್ರಮಾಣದಲ್ಲಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ತೀರಾ ಅಗತ್ಯವಾಗಿದೆ. ಕಾನೂನು ರೂಪಿಸಿ ಇದನ್ನು ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಜನಸಂಖ್ಯಾ ನಿಯಂತ್ರಣ ಮಸೂದೆ ನಿರ್ಣಾಯಕವಾಗಿದೆ. ಚೀನಾದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಒಂದು ಮಗು ನೀತಿ ಜಾರಿಗೊಳಿಸಿ ಯಶಸ್ವಿಯಾಗಿದೆ. ಅಲ್ಲಿ ನಿಮಿಷಕ್ಕೆ 10 ಮಕ್ಕಳು ಹುಟ್ಟಿದರೆ ಭಾರತದಲ್ಲಿ ಒಂದು ನಿಮಿಷಕ್ಕೆ 30 ಮಕ್ಕಳು ಜನಿಸುತ್ತಾರೆ. ಹೀಗಾದಲ್ಲಿ ಆ ದೇಶದೊಂದಿಗೆ ಸ್ಪರ್ಧೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಯಾವುದೇ ಧರ್ಮ, ಪಂಗಡಗಳನ್ನು ಗಮನದಲ್ಲಿಟ್ಟುಕೊಳ್ಳದೆ ಎಲ್ಲರಿಗೂ ಅನ್ವಯವಾಗುವಂತೆ ಮಸೂದೆ ರೂಪಿಸಬೇಕು. ಒಂದು ವೇಳೆ ಇದನ್ನು ಪಾಲಿಸದೇ ಇದ್ದಲ್ಲಿ ಅಂತಹವರಿಗೆ ಸರ್ಕಾರದ ಯಾವ ಪ್ರಯೋಜನವನ್ನೂ ನೀಡಬಾರದು. ಅವರ ಮತದಾನದ ಹಕ್ಕನ್ನು ಕೂಡಾ ಕಸಿದುಕೊಳ್ಳಬೇಕು ಎಂದರು.