ಜೈಪುರ, ನ 27 (DaijiworldNews/DB): ಮನಸ್ತಾಪವೊಂದು ತಾರಕಕ್ಕೇರಿ ವ್ಯಕ್ತಿಯೊಬ್ಬ ನೆರೆಮನೆಗೆ ನುಗ್ಗಿ ಗುಂಡು ಹಾರಿಸಿ ಮೂವರು ಸಹೋದರರನ್ನು ಹತ್ಯೆಗೈದ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯ ಸಿಕ್ರೋರಾ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಸಮಂದರ್, ಗಜೇಂದ್ರ ಮತ್ತು ಈಶ್ವರ್ ಕೊಲೆಯಾದವರು. ಆರೋಪಿ ಲಖನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಖನ್ ಮನೆಯಲ್ಲಿ ಇತ್ತೀಚೆಗೆ ಗಲಾಟೆ ನಡೆದಿದ್ದು, ಸಮಂದರ್ ಗಲಾಟೆ ಬಿಡಿಸಲು ಹೋಗಿದ್ದ. ಇದರಿಂದಾಗಿ ಲಖನ್ ಮತ್ತು ಸಮಂದರ್ ನಡುವೆ ಮನಸ್ತಾಪವೇರ್ಪಟ್ಟು ಜಗಳ ತಾರಕಕ್ಕೇರಿದೆ. ಇಂದು ಮುಂಜಾನೆ ಲಖನ್ ಮತ್ತಿತರರು ಸೇರಿಕೊಂಡು ಸಮಂದರ್ ಮನೆಗೆ ನುಗ್ಗಿ ಏಕಾಏಕಿ ಮನೆಯವರ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಮೂವರು ಸಹೋದರರು ಮೃತಪಟ್ಟಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡ ಗಜೇಂದ್ರ ಅವರ ಪತ್ನಿ, ಮಗ ಮತ್ತು ಸೊಸೆಯನ್ನು ಸ್ಥಳೀಯರು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.