ಕಾನ್ಪುರ, ನ 27 (DaijiworldNews/DB): ತಪ್ಪಾಗಿ ಮಗ್ಗಿ ಹೇಳಿದ ಎಂಬ ಕಾರಣಕ್ಕಾಗಿ ಶಿಕ್ಷಕನೊಬ್ಬ ಬಾಲಕನ ಕೈಯನ್ನು ಡ್ರಿಲ್ಲಿಂಗ್ ಮೆಷಿನ್ನಿಂದ ಕೊರೆದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರ ಪ್ರೇಮನಗರ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸಿಸಮು ನಿವಾಸಿಯಾಗಿರುವ 5ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕ ಅನುಜ್ ಪಾಂಡೆ ಎಂಬಾತ ಈ ಕ್ರೂರ ಶಿಕ್ಷೆ ನೀಡಿದಾತ. 2ರ ಮಗ್ಗಿ ಹೇಳುವಂತೆ ಶಿಕ್ಷಕ ವಿದ್ಯಾರ್ಥಿಗೆ ಸೂಚಿಸಿದ್ದು, ಬಾಲಕ ಅದನ್ನು ತಪ್ಪಾಗಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ ಪಕ್ಕದಲ್ಲೇ ಇದ್ದ ಡ್ರಿಲ್ ಮೆಷಿನ್ ತೆಗೆದುಕೊಂಡು ಬಾಲಕನ ಕೈಯನ್ನು ಕೊರೆದಿದ್ದಾನೆ. ಕೂಡಲೇ ಇನ್ನೊಬ್ಬ ಬಾಲಕ ಓಡಿ ಬಂದು ಶಿಕ್ಷಕನಿಂದ ಸಂತ್ರಸ್ತ ಬಾಲಕನನ್ನು ಬಿಡಿಸಿದ್ದಾನೆ. ಖಾಸಗಿ ಶಾಲೆಯೊಂದರಲ್ಲಿದ್ದ ಈ ಶಿಕ್ಷಕ ಕೆಲ ದಿನಗಳ ಹಿಂದಷ್ಟೇ ಈ ಶಾಲೆಗೆ ಆಗಮಿಸಿದ್ದ ಎನ್ನಲಾಗಿದೆ.
ಇನ್ನು ವಿಚಾರ ಬಾಲಕನ ಸಂಬಂಧಿಕರಿಗೆ ತಿಳಿದು ಕೂಡಲೇ ಅವರು ಶಾಲೆಗೆ ಆಗಮಿಸಿ ಗಲಾಟೆ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯನ್ನು ಪೊಲೀಸರೆದುರು ಬಾಲಕ ಹೇಳಿಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನು ಇಡೀ ಘಟನೆಯ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಪ್ರೇಮ್ನಗರ ಮತ್ತು ಶಾಸ್ತ್ರಿ ನಗರ ಬ್ಲಾಕ್ನ ಶಿಕ್ಷಣಾಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನ್ಪುರ ನಗರದ ಪ್ರಾಥಮಿಕ ಶಿಕ್ಷಣ ಅಧಿಕಾರಿ ಸುಜಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.