ಚೆನ್ನೈ, ನ 27 (DaijiworldNews/DB): ಜ್ಯೋತಿಷಿ ಹೇಳಿದ ಮಾತನ್ನು ನಂಬಿ ವ್ಯಕ್ತಿಯೊಬ್ಬ ಹಾವಿನ ಎದುರು ನಾಲಿಗೆ ಚಾಚಿ ಹಾವಿನಿಂದ ನಾಲಿಗೆಗೆ ಕಚ್ಚಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಈರೋಡ್ನಲ್ಲಿ ನಡೆದಿದೆ.
ಕಾಪಿಚೆಟ್ಟಿ ಪಾಳ್ಯಂನ ನಿವಾಸಿ ರಾಜಾ (54) ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ. ರಾಜಾ ರೈತನಾಗಿದ್ದು, ಸಂಕಷ್ಟವೊಂದರ ನಿವಾರಣೆಗಾಗಿ ಜ್ಯೋತಿಷಿಯ ಬಳಿ ಹೋಗಿ ಸಲಹೆ ಕೇಳಿದ್ದಾನೆ. ಈ ವೇಳೆ ನಾಗ ದೇವಸ್ಥಾನಕ್ಕೆ ಹೋಗಿ ಕೆಲವೊಂದು ಆಚರಣೆಗಳನ್ನು ನೆರವೇರಿಸಲು ಜ್ಯೋತಿಷಿ ಸಲಹೆ ಮಾಡಿದ್ದಾನೆ. ಅಲ್ಲದೆ ಹಾವಿನ ಬಳಿ ನಾಲಿಗೆ ಚಾಚುವುದರಿಂದ ಸಂಕಷ್ಟ ನಿವಾರಣೆಯಾಗುತ್ತದೆ ಎಂದೂ ಜ್ಯೋತಿಷಿ ಹೇಳಿದ್ದಾನೆ. ಜ್ಯೋತಿಷಿ ಮಾತನ್ನು ನಂಬಿದ ರೈತ ರಾಜಾ ದೇವಸ್ಥಾನದಲ್ಲಿ ವಿಧಿವಿಧಾನ ನೆರವೇರಿಸಿ ಕೊಳಕುಮಂಡಲ ಹಾವಿನ ಮುಂದೆ ಮೂರು ಬಾರಿ ನಾಲಿಗೆ ಚಾಚಿದ್ದಾನೆ. ಈ ವೇಳೆ ಸಿಟ್ಟುಗೊಂಡ ಹಾವು ಆತನ ನಾಲಿಗೆಗೆ ಕಚ್ಚಿದೆ. ಇದರಿಂದ ಆತನ ನಾಲಿಗೆ ಸೀಳಿ ಹೋಗಿದೆ.
ರಾಜನಿಗೆ ಹಾವು ಕಚ್ಚಿದ್ದನ್ನು ಕಂಡ ದೇವಳದ ಅರ್ಚಕರು ಕೂಡಲೇ ಆತನನ್ನು ರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಇದೀಗ ಆತನ ನಾಲಿಗೆಯನ್ನು ತುಂಡರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಯನ್ ಮೆಡಿಕಲ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್ ತಿಳಿಸಿರುವುದಾಗಿ ವರದಿಯಾಗಿದೆ.