ಕೋಲ್ಕತ್ತಾ, ನ 27 (DaijiworldNews/DB): ಪೊಲೀಸರಿಗೆ ಭಯ ಪಡಬೇಡಿ, ಅವಶ್ಯಬಿದ್ದರೆ ಅವರ ಮೇಲೆ ಬಾಂಬ್ ಹಾಕಿ ಎಂಬುದಾಗಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್ ನಾಯಕಿಯ ಹೇಳಿಕೆಯನ್ನು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಖಂಡಿಸಿದೆ.
ಬಿರ್ಬುಮ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಭ್ರತಾ ದತ್ತಾ, ಅಭಿಷೇಕ್ ಬ್ಯಾನರ್ಜಿಯವರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚುವವರ, ಧ್ವಂಸ ಮಾಡುವವರ ಹಣೆಗೆ ಗುಂಡು ಹೊಡೆಯಬೇಕು ಎಂದಿದ್ದರು. ಆದರೆ ಅಂತಹ ಮಾತುಗಳಿಗೆ ನಾನು ಹೆದರುವುದಿಲ್ಲ. ನಾನು ಪೊಲೀಸರ ಇಡೀ ದೇಹಕ್ಕೆ ಗುಂಡು ಹಾರಿಸಬಲ್ಲೆ, ಆ ಮೂಲಕ ಅವರ ದೇಹದಲ್ಲಿ ರಂಧ್ರ ಸೃಷ್ಟಿಸಬಲ್ಲೆ ಎಂದಿದ್ದಾರೆ.
ಅಲ್ಲದೆ ಅಗತ್ಯಬಿದ್ದರೆ ನೀವೂ ಹಾಗೆ ಮಾಡಿ, ಪೊಲೀಸರಿಗೆ ಭಯ ಪಡಬೇಡಿ, ಅಂತಹ ಸಂದರ್ಭ ಬಂದರೆ ಅವರ ಮೇಲೆ ಬಾಂಬ್ ಹಾಕಿ ಎಂದು ಕಾರ್ಯಕರ್ತರನ್ನೂ ಪ್ರಚೋದಿಸಿದ್ದಾರೆ.
ಬಹಿರಂಗ ಸಭೆಯಲ್ಲಿ ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕಿಯ ನಿಲುವಿಗೆ ಪಶ್ಚಿಮ ಬಂಗಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದೆ. ಅಲ್ಲದೆ ನಾಯಕಿ ಸುಭ್ರತಾ ದತ್ತಾ ಮಾತನಾಡಿರುವ ವೀಡಿಯೋವನ್ನು ಪೊಲೀಸರಿಗೆ ನೀಡುತ್ತೇನೆ. ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ, ಸಚಿವ ಫಿರ್ಹಾದ್ ಹಕೀಮ್ ತಿಳಿಸಿರುವುದಾಗಿ ವರದಿಯಾಗಿದೆ.