ಸಾಂಗ್ಲಿ (ಮಹಾರಾಷ್ಟ್ರ), ನ 26 (DaijiworldNews/DB): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಕನ್ನಡ ಧ್ವಜ ಹಾರಾಡಿದೆ. ಅಲ್ಲದೆ ಜೈ ಕರ್ನಾಟಕ ಘೋಷಣೆ ಮೊಳಗಿದೆ.
ಶುಕ್ರವಾರ ಮಹಾರಾಷ್ಟ್ರ ಪುಂಡರು ಕರ್ನಾಟಕ ಬಸ್ಗೆ ಕಲ್ಲೆಸೆದು ಜೈ ಮಹಾರಾಷ್ಟ್ರ ಎಂದು ಬರೆದಿದ್ದರು. ಇದಕ್ಕೆ ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಮಹಾ ಸಿಎಂ ಏಕನಾಥ ಶಿಂಧೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಶನಿವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ಕನ್ನಡಿಗರು ಕನ್ನಡ ಧ್ವಜ ಹಿಡಿದು ಕನ್ನಡಪರ ಜಯಘೋಷ ಕೂಗಿದ್ದಾರೆ.
ಗ್ರಾಮಸ್ಥರು ತಮ್ಮ ಗ್ರಾಮದ ಮುಖ್ಯದ್ವಾರಕ್ಕೆ ಕನ್ನಡ ಬಾವುಟವನ್ನು ಕಟ್ಟಿ ಜೈ ಕರ್ನಾಟಕ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೂ ಕನ್ನಡ ಧ್ವಜದೊಂದಿಗೆ ಕಟ್ಟಿ ಜೈಕಾರ ಕೂಗಿದ್ದಾರೆ. ಇದೇ ವೇಳೆ ಅಭಿವೃದ್ದಿಯತ್ತ ಗಮನ ಹರಿಸಿ ಎಂಬುದಾಗಿ ಗ್ರಾಮಸ್ಥರು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ನೀರು ಕೊಡಿ ಇಲ್ಲವೇ ನಮ್ಮ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಇದೇ ಗ್ರಾಮದ ಕನ್ನಡಿಗರು ಈ ಹಿಂದೆ ಪಾದಾಯಾತ್ರೆ ನಡೆಸಿದ್ದರು. ಇದೀಗ ಮತ್ತೆ ಜತ್ತ ತಾಲೂಕಿನ 42 ಹಳ್ಳಿಗಳ ಜನರು ಒಟ್ಟಾಗಿ ಹೋರಾಟ ಆರಂಭಿಸಿದ್ದು, ನೀರು ನೀಡದೇ ಇದ್ದಲ್ಲಿ ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಮಹಾ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.