ಖಾರ್ಗೋನ್, ನ 26 (DaijiworldNews/DB): ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯ ಬರ್ವಾಹಾ ಬಳಿ ಶನಿವಾರ ನೆಲಕ್ಕೆ ಬಿದ್ದ ಘಟನೆ ನಡೆದಿದೆ. ಇನ್ನು ರಸ್ತೆಯ ದುಸ್ಥಿತಿಯಿಂದಾಗಿಯೇ ಈ ಘಟನೆ ಸಂಭವಿಸಿದೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಕಿಡಿ ಕಾರಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇದೀಗ ಮಧ್ಯಪ್ರದೇಶದಲ್ಲಿ ಸಾಗುತ್ತಿದ್ದು, ಶನಿವಾರ ದಿಗ್ವಿಜಯ್ ಸಿಂಗ್ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯ ನಡುವೆ ಚಹಾ ವಿರಾಮಕ್ಕೆಂದು ರೆಸ್ಟೋರೆಂಟ್ವೊಂದಕ್ಕೆ ತೆರಳುತ್ತಿದ್ದ ವೇಳೆ ದಿಗ್ವಿಜಯ್ ಸಿಂಗ್ ನೆಲಕ್ಕೆ ಬಿದ್ದರು. ಕೂಡಲೇ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮೇಲಕೆತ್ತಿದರು.
ಇನ್ನು ಈ ಘಟನೆಗೆ ರಸ್ತೆಯ ದುಸ್ಥಿತಿಯೇ ಕಾರಣ ಎಂದು ಕಾಂಗ್ರೆಸ್ ಆಡಳಿತರೂಢ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ ಇಂತಹ ಘಟನೆಗಳಾಗುತ್ತಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಧ್ಯಮ ಉಸ್ತುವಾರಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನುಲ್ಲೇಖಿಸಿ ವ್ಯಂಗ್ಯವಾಡಿರುವ ಜೈರಾಮ್ ರಮೇಶ್, ಅಮೆರಿಕಾದ ವಾಷಿಂಗ್ಟನ್ ಡಿಸಿಗಿಂತ ಮಧ್ಯಪ್ರದೇಶದಲ್ಲಿರುವ ರಸ್ತೆಗಳು ತುಂಬಾ ಸುಂದರವಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.
ಆದರೆ ಇದೇ ವೇಳೆ ಬಿಜೆಪಿ ನಾಯಕ ನರೇಂದ್ರ ಸಲೂಜಾ ಅವರು, ದಿಗ್ವಿಜಯ್ ಸಿಂಗ್ ಬೀಳಲು ರಸ್ತೆಯ ದುಸ್ಥಿತಿ ಕಾರಣ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟದಿಂದ ಅವರು ಬಿದ್ದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.