ತಿರುವನಂತಪುರಂ, ನ 26 (DaijiworldNews/DB): ದೇಶದಲ್ಲಿ ಜಾತ್ಯಾತೀತ, ಪ್ರಜಾಪ್ರಭುತ್ವದಂತ ಸಾಂವಿಧಾನಿಕ ಮೌಲ್ಯಗಳಿಗೆ ಗಂಭೀರ ಸವಾಲುಗಳು ಎದುರಾಗುತ್ತಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ದಿನಾಚರಣೆ ಸಲುವಾಗಿ ಶನಿವಾರ ಸಂದೇಶ ನೀಡಿದ ಅವರು, ನಿಜವಾದ ಫೆಡರಲ್ ಪರಿಕಲ್ಪನೆಯ ಸಾಕಾರಕ್ಕೆ ರಾಜ್ಯಗಳಿಗೆ ತುಂಬಾ ಸಂಕಷ್ಟಗಳು ಎದುರಾಗುತ್ತಿವೆ. ಜಾತ್ಯಾತೀತ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯಂತಹ ಸಾಂವಿಧಾನಿಕ ಮೌಲ್ಯಗಳು ಸವಾಲುಗಳೊಂದಿಗೇ ಸಾಗುತ್ತಿವೆ ಎಂದರು.
ಇನ್ನು ಈ ವರ್ಷ 73ನೇ ವಾರ್ಷಿಕೋತ್ಸವದಲ್ಲಿರುವ ಭಾರತದ ಸಂವಿಧಾನಕ್ಕೆ ಹಲವು ಸವಾಲುಗಳು ಎದುರಾಗುತ್ತಿವೆ. ಅಪಾಯಗಳನ್ನು ತಡೆದು ಸಂವಿಧಾನದ ಮೌಲ್ಯ ಉಳಿಸುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರದ್ದು. ಅದಕ್ಕಾಗಿ ಈಗ ಸಮಯ ಒದಗಿ ಬಂದಿದೆ ಎಂದು ವಿಶ್ಲೇಷಿಸಿದರು.
ಚುನಾಯಿತ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಉನ್ನತ ಸಾಂವಿಧಾನಿಕ ಹುದ್ದೆಗಳ ಬಳಕೆಯಾಗುತ್ತಿರುವುದು ದುರಂತ ಎಂದು ಇದೇ ವೇಳೆ ಅವರು ಪರೋಕ್ಷವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಸರ್ಕಾರದ ನಡುವಿನ ಅಸಮಾಧಾನವನ್ನು ಉಲ್ಲೇಖಿಸಿದರು.