ತಮಿಳುನಾಡು, ನ 26 (DaijiworldNews/DB): ಹಿಂದಿ ಭಾಷಾ ಹೇರಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದ ವೃದ್ದರೊಬ್ಬರು ಡಿಎಂಕೆ ಕಚೇರಿ ಮುಂಭಾಗ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಡಿಎಂಕೆಯ ಮಾಜಿ ಕೃಷಿ ಒಕ್ಕೂಟದ ಸಂಘಟಕ ತಂಗವೇಲ್ (85) ಪೆಟ್ರೋಲ್ ಸುರಿದುಕೊಂಡವರು. ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಮೆಟ್ಟೂರು ಪಕ್ಕದ ತಲೈಯೂರಿನಲ್ಲಿರುವ ಡಿಎಂಕೆ ಪಕ್ಷದ ಕಚೇರಿಯ ಮುಂಭಾಗ ತಂಗವೇಲ್ ಅವರು ಪ್ರತಿಭಟನೆ ನಡೆಸುತ್ತಿದ್ದರು. ಬೆಳಗ್ಗೆ ಸುಮಾರು 11 ಗಂಟೆ ಗಂಟೆಗೆ ಅವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಹಿಂದಿಯನ್ನು ಮಾಧ್ಯಮವಾಗಿ ಶಿಕ್ಷಣದಲ್ಲಿ ತರಲು ಉದ್ದೇಶಿಸಿದ್ದ ಕೇಂದ್ರ ಸರ್ಕಾರದ ಕ್ರಮಕ್ಕೆ ಅವರು ಆಕ್ರೋಶಗೊಂಡಿದ್ದರು. ನಮ್ಮ ಮಾತೃಭಾಷೆ ತಮಿಳು, ಹಿಂದು ವಿದೂಷಕರ ಭಾಷೆ. ಇದನ್ನು ಶಿಕ್ಷಣದಲ್ಲಿ ಹೇರಿದರೆ ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಪೆಟ್ರೋಲ್ ಸುರಿದುಕೊಳ್ಳುವುದಕ್ಕೂ ಮುನ್ನ ಪತ್ರದಲ್ಲಿ ಬರೆದಿದ್ದರು ಎಂದು ತಿಳಿದು ಬಂದಿದೆ.