ಕಛ್, ನ 26 (DaijiworldNews/DB): ಗುಜರಾತ್ನಲ್ಲಿ ಮೂರು ದಶಕಗಳಿಂದ ಬಿಜೆಪಿಯೇ ಗೆಲುವು ಸಾಧಿಸುತ್ತಿದೆ. ಆ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ಗೆ ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸದಂತೆ ಕಾಂಗ್ರೆಸ್ ಪಕ್ಷವನ್ನು ಯಾರಾದರೂ ತಡೆದಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮೂರು ದಶಕಗಳಿಂದ ಗುಜರಾತ್ನಲ್ಲಿ ಬಿಜೆಪಿಯೇ ಆಳ್ವಿಕೆ ನಡೆಸಲು ಕಾಂಗ್ರೆಸ್ನ ಅಸಮರ್ಥತೆಯೇ ಕಾರಣ ಎಂದು ಟೀಕಿಸಿದ ಅವರು, ಕಾಂಗ್ರೆಸ್ನ ಮತಗಳನ್ನು ನಾವು ವಿಭಜಿಸುತ್ತೇವೆ ಎಂಬ ಆರೋಪ ಸುಳ್ಳು ಎಂದರು.
ಬಿಜೆಪಿಯನ್ನು ಸೋಲಿಸಲು ಅಸಮರ್ಥವಾಗಿರುವುದಕ್ಕೆ ಕಾಂಗ್ರೆಸ್ ನಮ್ಮ ಮೇಲೆ ವೃಥಾ ಆರೋಪ ಹೊರಿಸುತ್ತಿದೆ. ಮತ ಹಂಚಿಕೆಯನ್ನು ತಿನ್ನಲು ನಾವು೮ ಬಂದಿಲ್ಲ. ನಮ್ಮ ಹೋರಾಟ ಬಿಜೆಪಿ ವಿರುದ್ದ ಮಾತ್ರ. 182 ಕ್ಷೇತ್ರಗಳ ಪೈಕಿ 13ರಲ್ಲಿ ಮಾತ್ರ ನಾವು ಸ್ಪರ್ಧಿಸುತ್ತಿದ್ದೇವೆ. 169 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿ ಎಂದವರು ಸವಾಲೆಸೆದರು.
ಗುಜರಾತ್ನಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ. ನಮ್ಮನ್ನು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆಂದರೆ, ಕಾಂಗ್ರೆಸ್ಗೂ ನಾವು ಅದನ್ನೇ ಹೇಳಬೇಕಾಗುತ್ತದೆ. 2019ರಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತಿರುವುದೂ ಒಂದು ರಹಸ್ಯ ಒಪ್ಪಂದವೇ ಎಂದು ಪ್ರಶ್ನಿಸಿದರು.