ಶಿವಮೊಗ್ಗ, ನ 26 (DaijiworldNews/DB): ವಧು ಹುಡುಕಿ ಸೋತ ಯುವಕನೊಬ್ಬ ವಧು ಹುಡುಕಿಕೊಡಿ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಯವರಿಗೇ ಪತ್ರ ಬರೆದಿದ್ದಾನೆ!
ಶಿವಮೊಗ್ಗದ ಭದ್ರಾವತಿ ಮೂಲದ ಪ್ರವೀಣ ಓ.ಎಸ್. ಎಂಬಾತನೇ ವಧು ಹುಡುಕಿಕೊಡಲು ಎಸ್ಪಿಗೆ ಪತ್ರ ಬರೆದಾತ. ಸದ್ಯ ಈತ ಬರೆದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
’ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಗೊಲ್ಲ ಸಮುದಾಯಕ್ಕೆ ಸೇರಿದ್ದು, ನನ್ನ ತಂದೆ ಇತ್ತೀಚೆಗೆ ನಿಧನರಾಗಿದ್ದಾರೆ. ಅಣ್ಣ ಕೂಡ ಮದ್ವೆಯಾಗಿದ್ದಾನೆ. ನಾನು ಈ ಹಿಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಅಧ್ಯಾಪಕನಾಗಿದ್ದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲೂ ಕೆಲಸ ಮಾಡಿದ್ದೆ. ಇದೀಗ ಭದ್ರಾವತಿಯಲ್ಲಿರುವ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ವಧು ಅನ್ವೇಷಣೆಯಲ್ಲಿ ಯಾವುದೂ ಸರಿ ಹೋಗದ ಕಾರಣ ನಮ್ಮ ಜಾತಿಯ ವಧು ತಮ್ಮ ಅಧೀನದಲ್ಲಿ ಯಾರಾದರೂ ಕಂಡು ಬಂದಲ್ಲಿ ನನಗೆ ತಿಳಿಸಿ ವಿವಾಹಕ್ಕೆ ಸಹಾಯ ಮಾಡಬೇಕು’ ಎಂದು ಪತ್ರದಲ್ಲಿ ಯುವಕ ಕೋರಿದ್ದಾನೆ.
ಅಲ್ಲದೆ ತನಗೆ ಪರಿಚಿತರಾದ ಪುರಸಭೆ ಸದಸ್ಯ ಮತ್ತು ಗ್ರಾಮ ಪಂಚಾಯತ್ ಸದಸ್ಯನ ಹೆಸರನ್ನೂ ಪತ್ರದಲ್ಲಿ ಆತ ಉಲ್ಲೇಖಿಸಿದ್ದಾನೆ. ಜೊತೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನೂ ಅರ್ಜಿ ಜೊತೆ ಲಗತ್ತಿಸಲಾಗಿದ್ದು, ಅರ್ಜಿಯನ್ನು ಪೊಲೀಸರಿಂದ ಪರಿಶೀಲಿಸಿರುವುದಾಗಿ ಬರೆದುಕೊಂಡಿದ್ದಾನೆ.
ಇನ್ನು ಪ್ರವೀಣ ಎಂಬಾತ ಬರೆದ ಈ ವಧು ಬೇಕೆಂಬ ಮನವಿ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾನಾ ರೀತಿಯ ಕಮೆಂಟ್ಗಳು ಬಂದಿವೆ.